ನವದೆಹಲಿ: ಮಾಧ್ಯಮಗಳಿಗೆ ಸಂಬಂಧಿಸಿದ ಕಾನೂನು ಚೌಕಟ್ಟನ್ನು ಪರಿಶೀಲಿಸಲು ಹಾಗೂ ಈ ಸಂಬಂಧ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಲು ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ನೇತೃತ್ವದಲ್ಲಿ ಸ್ವತಂತ್ರ ಸಮಿತಿಯೊಂದನ್ನು ರಚಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಚಲನಚಿತ್ರ ನಿರ್ಮಾಪಕ ನೀಲೇಶ್ ನವಲಖಾ ಮತ್ತು ಸಿವಿಲ್ ಎಂಜಿನಿಯರ್ ನಿತಿನ್ ಮೆಮಾನ್ ಅವರು ಜಂಟಿಯಾಗಿ ಈ ಅರ್ಜಿ ಸಲ್ಲಿಸಿದ್ದಾರೆ.
‘ಎಲೆಕ್ಟ್ರಾನಿಕ್ ಮಾಧ್ಯಮವು ಅಶಿಸ್ತಿನ ಕುದುರೆ ಇದ್ದಂತೆ. ಅದಕ್ಕೆ ಲಗಾಮು ಹಾಕುವುದು ಅವಶ್ಯ. ಮಾಧ್ಯಮಗಳು ಹಾಗೂ ವಾಹಿನಿಗಳ ವಿರುದ್ಧದ ದೂರುಗಳ ವಿಚಾರಣೆಗಾಗಿಯೇ ಮಾಧ್ಯಮ ನ್ಯಾಯ ಮಂಡಳಿಯೊಂದನ್ನು ಸ್ಥಾಪಿಸಬೇಕು’ ಎಂದು ವಕೀಲರಾದ ರಾಜೇಶ್ ಆನಂದ್, ಶಾಶ್ವತ್ ಆನಂದ್ ಮತ್ತು ಅಮಿತ್ ಪೈ ಅವರ ಮೂಲಕ ಸಲ್ಲಿಸಿರುವ ಪಿಐಎಲ್ನಲ್ಲಿ ಅರ್ಜಿದಾರರು ವಿನಂತಿಸಿದ್ದಾರೆ.
‘ಮಾಧ್ಯಮಗಳ ಮೂಲಭೂತ ಹಕ್ಕನ್ನು ಹತ್ತಿಕ್ಕಬೇಕೆಂಬ ಉದ್ದೇಶದಿಂದ ನಾವು ಖಂಡಿತವಾಗಿಯೂ ಪಿಐಎಲ್ ಸಲ್ಲಿಸಿಲ್ಲ. ತಪ್ಪು ಮಾಹಿತಿಗಾಗಿ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿಸಲಿ, ಸುದ್ದಿ ವೈಭವೀಕರಣ, ಸುಳ್ಳು ಸುದ್ದಿಗಳ ಬಿತ್ತರಕ್ಕೆ ಕಡಿವಾಣ ಹಾಕಲಿ ಎಂಬುದಷ್ಟೇ ನಮ್ಮ ಕಳಕಳಿ’ ಎಂದು ನಿಲೇಶ್ ಮತ್ತು ನಿತಿನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.