ADVERTISEMENT

ಸನಾತನ ಧರ್ಮ: ಸಿಬಿಐ ತನಿಖೆಗೆ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 16:35 IST
Last Updated 15 ಸೆಪ್ಟೆಂಬರ್ 2023, 16:35 IST
<div class="paragraphs"><p> ‘ಸುಪ್ರೀಂ’ </p></div>

‘ಸುಪ್ರೀಂ’

   

ನವದೆಹಲಿ: ಸೆಪ್ಟೆಂಬರ್ 2 ರಂದು ನಡೆದ ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದ ವಿರುದ್ದ ಸಿಬಿಐ ತನಿಖೆ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 

ಉದಯನಿಧಿ, ಪೀಟರ್ ಅಲ್ಫೋನ್ಸ್, ಎ.ರಾಜಾ, ಥೋಲ್ ತಿರುಮಾವಲವನ್ ಮತ್ತು ಅವರ ಅನುಯಾಯಿಗಳು ಸನಾತನ ಧರ್ಮ ಅಥವಾ ಹಿಂದೂ ಧರ್ಮದ ಕುರಿತು ಯಾವುದೇ ದ್ವೇಷ ಭಾಷಣ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಕೋರಿ ಬಿ.ಜಗನ್ನಾಥ್ ಅರ್ಜಿ ಸಲ್ಲಿಸಿದ್ದಾರೆ. 

ADVERTISEMENT

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ತುರ್ತು ವಿಚಾರಣೆಗಾಗಿ ವಕೀಲರು ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ನ್ಯಾಯಪೀಠ, ಎಲ್ಲರೂ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಅನುಸರಿಸಬೇಕು ಎಂದು ಹೇಳಿದೆ. 

ಸನಾತನ ಧರ್ಮದ ವಿರುದ್ಧ ಭಾಷಣ ಮಾಡಿದ ಉದಯನಿಧಿ ಮತ್ತು ಎ.ರಾಜಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ವಕೀಲ ವಿನೀತ್ ಜಿಂದಾಲ್ ಅವರು ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

ಸನಾತನ ಧರ್ಮ ನಿರ್ಮೂಲನಾ ಸಮ್ಮೇಳನದಲ್ಲಿ ರಾಜ್ಯ ಸಚಿವರು ಭಾಗವಹಿಸುವುದು ಅಸಂವಿಧಾನಿಕ ಮತ್ತು ಸಂವಿಧಾನದ 25 ಮತ್ತು 26 ನೇ ವಿಧಿಗಳ ಉಲ್ಲಂಘನೆ ಎಂದು ಘೋಷಿಸುವಂತೆ ಜಗನ್ನಾಥ್ ತಮ್ಮ ಮನವಿಯಲ್ಲಿ ಕೋರಿದ್ದಾರೆ. 

ಕರ್ನಾಟಕದ ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಎಲ್ಲಾ ಮಾಧ್ಯಮಿಕ ಶಾಲೆಗಳಲ್ಲಿ ಯಾವುದೇ ಹಿಂದೂ ಧರ್ಮದ ವಿರುದ್ಧ ಈ ಸಮ್ಮೇಳನಗಳು ನಡೆಯಬಾರದು ಎಂದು ತಮಿಳುನಾಡು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಸಮ್ಮೇಳನಕ್ಕೆ ಪೊಲೀಸ್ ಅನುಮತಿ ಹೇಗೆ ನೀಡಲಾಯಿತು, ಸಮ್ಮೇಳನಕ್ಕೆ ಕಾರಣರಾದವರು  ಮತ್ತು  ಸಂಘಟನೆಯ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಕ್ಷಣ ನಿರ್ದೇಶನ ನೀಡುವಂತೆ ಮನವಿಯಲ್ಲಿ ‌‌ಕೋರಲಾಗಿದೆ.

ಸುಪ್ರೀಂ ಕೋರ್ಟ್ 2018ರ ತೀರ್ಪಿನ ಪ್ರಕಾರ ದ್ವೇಷ ಭಾಷಣಕ್ಕಾಗಿ ತಕ್ಷಣ ನೋಡಲ್ ಅಧಿಕಾರಿ ನೇಮಿಸುವಂತೆ ಗೃಹ ಕಾರ್ಯದರ್ಶಿ ಮತ್ತು ತಮಿಳುನಾಡು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.