ನವದೆಹಲಿ: ಮತಪತ್ರಗಳು ಮತ್ತು ಮತ ಯಂತ್ರಗಳ(ಇವಿಎಂ) ಮೇಲಿರುವ ‘ಚಿಹ್ನೆ‘ಗಳನ್ನು ತೆಗೆದು, ಆ ಜಾಗದಲ್ಲಿ ಅಭ್ಯರ್ಥಿಗಳ ಹೆಸರು, ಶೈಕ್ಷಣಿಕ ವಿದ್ಯಾರ್ಥಹತೆ ಮತ್ತು ಛಾಯಾಚಿತ್ರವನ್ನು ಮುದ್ರಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಬಿಜೆಪಿ ಮುಖಂಡ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಈ ಅರ್ಜಿಯಲ್ಲಿ ’ಇವಿಎಂನಲ್ಲಿ ಪಕ್ಷದ ಚಿಹ್ನೆ ಬಳಸುವುದು ಕಾನೂನು ಬಾಹಿರ, ಅಸಂವಿಧಾನಿಕ ಮತ್ತು ಸಂವಿಧಾನದ ಉಲ್ಲಂಘನೆ ಎಂದು ಘೋಷಿಸಲು ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.
ವಕೀಲ ಅಶ್ವಿನಿಕುಮಾರ್ ದುಬೆ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ‘ರಾಜಕೀಯದಲ್ಲಿರುವ ಭ್ರಷ್ಟಾಚಾರ ಮತ್ತು ಅಪರಾಧ ಎಂಬ ಕಳೆಗಳನ್ನು ನಿರ್ಮೂಲನೆ ಮಾಡಲು ಮತಪತ್ರ ಮತ್ತು ಇವಿಎಂನಲ್ಲಿ ರಾಜಕೀಯ ಪಕ್ಷದ ಚಿಹ್ನೆಗಳ ಬದಲಿಗೆ ಅಭ್ಯರ್ಥಿಯ ಹೆಸರು, ವಯಸ್ಸು, ಶೈಕ್ಷಣಿಕ ಅರ್ಹತೆ ಮತ್ತು ಛಾಯಾಚಿತ್ರ ಮುದ್ರಿಸುವುದು ಉತ್ತಮ ವಿಧಾನ ಎಂದು ಮನವಿ ಮಾಡಲಾಗಿದೆ.
‘ರಾಜಕೀಯ ಪಕ್ಷದ ಚಿಹ್ನೆ ಇಲ್ಲದ ಮತಪತ್ರ ಮತ್ತು ಇವಿಎಂನಿಂದ ಅನೇಕ ಪ್ರಯೋಜನಗಳಿವೆ. ಮತದಾರರಿಗೆ ಬುದ್ಧಿವಂತ, ಶ್ರದ್ಧೆ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ‘ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.