ಜೈಪುರ:ತುರ್ತು ಪರಿಸ್ಥಿತಿಯ 45ನೇ ವರ್ಷದ ನೆನಪಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧತೀವ್ರ ವಾಗ್ದಾಳಿ ನಡೆಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಟುವಾಗಿ ಟೀಕಿಸಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ಗೆಹ್ಲೋಟ್,ಬಿಜೆಪಿ ನಾಯಕರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮತ್ತು ಕಾಂಗ್ರೆಸ್ ಪಕ್ಷದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರಶ್ನಿಸಲು ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ.
‘ಮೋದಿ ಮತ್ತು ಶಾ ಅವರು, ಇತರ ನಾಯಕರು ಉಸಿರಾಡದಂತೆಬಿಜೆಪಿ ಮತ್ತು ಎನ್ಡಿಎ ಸರ್ಕಾರವನ್ನು ಹೈಜಾಕ್ ಮಾಡಿದ್ದಾರೆ. ಬಿಜೆಪಿಯ ಯಾರೊಬ್ಬರೂಸಿಡಬ್ಲ್ಯುಸಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರಶ್ನಿಸಲು ಯೋಗ್ಯರಲ್ಲ’ ಎಂದಿದ್ದಾರೆ.
‘ಮೂರು,ನಾಲ್ಕು ಸಚಿವರನ್ನು ಬಿಟ್ಟು ಉಳಿದಂತೆಮೋದಿ ಸಂಪುಟದಲ್ಲಿ ಯಾರೆಲ್ಲ ಇದ್ದಾರೆ ಎಂಬುದೇಸಾರ್ವಜನಿಕರಿಗೆ ತಿಳಿದಿಲ್ಲ ಎಂಬುದು ಆಘಾತಕಾರಿ’ ಎಂದುಗುಡುಗಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದ ಕುರಿತು ಸರಣಿ ಟ್ವೀಟ್ ಮಾಡಿದ್ದಶಾ, ‘ಒಂದು ಕುಟುಂಬ’ದ ಹಿತಾಸಕ್ತಿ ಕಾಂಗ್ರೆಸ್ ಪಕ್ಷವನ್ನು ಬಾಧಿಸುತ್ತಿದೆ. ಈಗಲೂ ಆ ಪಕ್ಷದಲ್ಲಿ ತುರ್ತು ಪರಿಸ್ಥಿತಿ ಮನಸ್ಥಿತಿಯೇ ಏಕಿದೆ? ಕಾಂಗ್ರೆಸ್ನಲ್ಲಿ ಮುಖಂಡರಿಗೆ ಉಸಿರುಗಟ್ಟುವ ಸ್ಥಿತಿ ಇರುವುದು ಕಹಿಯಾದ ಸತ್ಯ’ ಎಂದು ಹೇಳಿದ್ದರು.
‘45 ವರ್ಷದ ಹಿಂದೆ ಈ ದಿನ ಅಧಿಕಾರಕ್ಕಾಗಿ ಹಪಾಹಪಿಸಿದ್ದ ಕುಟುಂಬವು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿತು. ದಿನಬೆಳಗಾಗುವುದರಲ್ಲಿ ದೇಶದಲ್ಲಿ ವಿಷಮ ಸ್ಥಿತಿ ನಿರ್ಮಾಣವಾಯಿತು. ಮಾಧ್ಯಮ, ನ್ಯಾಯಾಲಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಕಸಿಯಲಾಯಿತು. ಬಡ, ಕೆಳವರ್ಗದವರ ಮೇಲೆ ಶೋಷಣೆ ನಡೆಯಿತು’ ಎಂದು ಕುಟುಕಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.