ಕೇದಾರನಾಥ:ಪ್ರಧಾನಿ ನರೇಂದ್ರ ಮೋದಿ ಬುಧವಾರ ದೀಪಾವಳಿ ಪ್ರಯುಕ್ತ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
2017ರ ಅಕ್ಟೋಬರ್ನಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದ ಕೇದಾರಪುರಿ ಯೋಜನೆಯ ಪರಿಶೀಲನೆ ನಡೆಸಿದರು. 2013ರ ಪ್ರವಾಹದಲ್ಲಿ ಸಾವಿರಾರು ಮಂದಿ ಪ್ರಾಣಕಳೆದುಕೊಂಡಿದ್ದರು ಹಾಗೂ ಇಲ್ಲಿನ ದೇವಾಲಯ, ಸುತ್ತಮುತ್ತಲಿನ ಪ್ರದೇಶಗಳಿಗೆ ಭಾರೀ ಹಾನಿಯಾಗಿತ್ತು.
ಮಂಗಳವಾರ ಕೇದರನಾಥ ದೇವಾಲಯ ಮತ್ತು ಸಮೀಪದ ಸ್ಥಳಗಳಲ್ಲಿ 5,100 ಹಣತೆಗಳನ್ನು ಬೆಳಗಿಸಲಾಗಿದೆ. ಉತ್ತರಾಖಂಡದ ಹರ್ಷಿಲ್ನಲ್ಲಿ ಭಾರತೀಯ ಸಶಸ್ತ್ರ ಪಡೆ ಯೋಧರನ್ನು ಭೇಟಿಯಾಗಿ ಸಿಹಿ ತಿನಿಸಿದರು.ಉತ್ತರಕಾಶಿ ಜಿಲ್ಲೆಯ ಭಾರತ–ಚೀನಾ ಗಡಿ ಪ್ರದೇಶದಲ್ಲಿ 7,860 ಅಡಿ ಎತ್ತರದಲ್ಲಿ ಹರ್ಷಿಲ್ ವಲಯವಿದೆ.
ಇಸ್ರೇಲ್ಪ್ರಧಾನಿ ಬೆಂಜಮಿನ್ ನೇತನ್ಯಾಹು ಮಂಗಳವಾರ ರಾತ್ರಿ ಪ್ರಧಾನಿ ಮೋದಿ ಅವರಿಗೆ ದೀಪಾವಳಿ ಶುಭಾಶಯ ತಿಳಿಸಿದ್ದು, ಈ ಬಾರಿ ಎಲ್ಲಿ ದೀಪಾವಳಿ ಆಚರಿಸುವಿರಿ ಎಂದು ಕೇಳಿದ್ದರು. ’ಪ್ರತಿ ವರ್ಷ ನಮ್ಮ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ಸೇನಾ ಪಡೆಗೆ ಅಚ್ಚರಿ ನೀಡುತ್ತೇನೆ. ಈ ಬಾರಿಯೂ ಸಹ ನಮ್ಮ ಧೈರ್ಯಶಾಲಿ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿದ್ದೇನೆ. ಅವರೊಂದಿಗೆ ಕಾಲ ಕಳೆಯುವುದೇವಿಶೇಷ’ ಎಂದು ಮೋದಿ ಟ್ವೀಟಿಸಿದ್ದಾರೆ. ನೇತನ್ಯಾಹು ಹಿಂದಿಯಲ್ಲಿ ಮಾಡಿರುವ ಟ್ವೀಟ್ಗೆ, ಮೋದಿ ಹಿಬ್ರು ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಮೋದಿ ಪಂಜಾಬ್ ಗಡಿ ಭಾಗಕ್ಕೆ ತಲುಪಲಿದ್ದು, ಅಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.