ನವದೆಹಲಿ(ಪಿಟಿಐ):ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಸ್ನೇಹಿತ’ರ ಭವಿಷ್ಯದ ಹಿತವನ್ನೂ ವಿದೇಶಗಳಲ್ಲೂ ಭದ್ರಪಡಿಸಿದ್ದಾರೆ. ಆದರೆ, ಉದ್ಯೋಗವಿಲ್ಲದೇಯುವಜನರು ಮಾತ್ರ ದೇಶ ತೊರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಕೇಂದ್ರೀಯ ಅರೆಸೇನಾ ಪಡೆಯ ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಪರೀಕ್ಷೆ ಬರೆದ ಯುವಕ– ಯುವತಿಯರು ಇನ್ನೂ ನೇಮಕಾತಿ ಆದೇಶ ಪತ್ರ ಸಿಗದೇ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಡಿಯೊ ತುಣುಕನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.
‘ಪ್ರಧಾನಿ ಮೋದಿಯವರು ತಮ್ಮ ಸ್ನೇಹಿತರ ಭವಿಷ್ಯವನ್ನು ವಿದೇಶಗಳಲ್ಲೂ ಭದ್ರಪಡಿಸುತ್ತಿದ್ದಾರೆ. ಆದರೆ, ಈ ದೇಶದ ಯುವ ನಿರುದ್ಯೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಯುವಜನರ ಬಗ್ಗೆ ಯಾಕಿಷ್ಟು ತಾರತಮ್ಯ’ ಎಂದು ರಾಹುಲ್ ಗಾಂಧಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ವಿಡಿಯೊದಲ್ಲಿರುವ ಮಾಹಿತಿ ಪ್ರಕಾರ, ಉದ್ಯೋಗ ಆಕಾಂಕ್ಷಿಗಳು 2018ರಲ್ಲೇ ಪರೀಕ್ಷೆ ಬರೆದಿದ್ದು, ಒಂದೂವರೆ ವರ್ಷದಿಂದ ನೇಮಕಾತಿ ಆದೇಶ ಪತ್ರಕ್ಕಾಗಿ ಕಾಯುತ್ತಿದ್ದಾರೆ. ನಾಗಪುರದಿಂದ– ದೆಹಲಿಯವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.