ADVERTISEMENT

PMO: ಕೇಂದ್ರದ ಉನ್ನತ ಅಧಿಕಾರಿಗಳ ಪುನರ್‌ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 2 ಮೇ 2022, 15:33 IST
Last Updated 2 ಮೇ 2022, 15:33 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೋಮವಾರ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಪುನರ್‌ವ್ಯವಸ್ಥೆ ಮಾಡಿದ್ದು, ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಅವರನ್ನು ಸಹಕಾರ ಕಾರ್ಯದರ್ಶಿಯಾಗಿ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿ (ಡಿಒಪಿಟಿ) ಪಿ.ಕೆ.ತ್ರಿಪಾಠಿ ಅವರನ್ನು ಸಚಿವಾಲಯದ ಕಾರ್ಯದರ್ಶಿ ಹುದ್ದೆಗೆ ನಿಯುಕ್ತಿಗೊಳಿಸಿದೆ.

ನಿವೃತ್ತ ಐಎಎಸ್ ಅಧಿಕಾರಿ ತರುಣ್ ಕಪೂರ್ ಅವರನ್ನು ಪ್ರಧಾನ ಮಂತ್ರಿಯ ಸಲಹೆಗಾರರನ್ನಾಗಿ ನೇಮಿಸಿದೆ. ಮಧ್ಯಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ಹರಿ ರಂಜನ್ ರಾವ್, ಬಿಹಾರ ಕೇಡರ್‌ನ 1994 ಬ್ಯಾಚ್ ಅಧಿಕಾರಿ ಅತೋಷ್ ಚಂದ್ರ ಅವರನ್ನು ಪ್ರಧಾನ ಮಂತ್ರಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿಗಳನ್ನಾಗಿ ನಿಯುಕ್ತಿಗೊಳಿಸಲಾಗಿದೆ.

ಕೇರಳ ಕೇಡರ್‌ನ 1988ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಜ್ಞಾನೇಶ್‌ ಕುಮಾರ್‌ ಅವರು ಪ್ರಸ್ತುತ ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡ ಡಿ.ಕೆ.ಸಿಂಗ್ ಸ್ಥಾನಕ್ಕೆ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

ADVERTISEMENT

ಹೊಸ ಸಹಕಾರ ನೀತಿಯನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಕುಮಾರ್‌ ಅವರನ್ನು ಅಮಿತ್ ಶಾ ನೇತೃತ್ವದ ಸಹಕಾರ ಸಚಿವಾಲಯಕ್ಕೆ ನೇಮಕ ಮಾಡಲಾಗಿದೆ. ಈ ಹಿಂದೆ ಅಮಿತ್‌ ಶಾ ಅವರ ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಕುಮಾರ್‌ ಕಾರ್ಯನಿರ್ವಹಿಸಿದ್ದರು.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಯನ್ನಾಗಿ 1988ರ ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್ ಅಧಿಕಾರಿ ಎಸ್.ರಾಧಾ ಚೌಹಾಣ್ ಅವರನ್ನು ನೇಮಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಯಾಗಿ 1990ರ ಬ್ಯಾಚ್‌ನ ಕೇರಳ ಕೇಡರ್‌ ಅಧಿಕಾರಿ ಅಲ್ಕೇಶ್‌ ಶರ್ಮಾ, ಸಣ್ಣ ರೈತರ ಕೃಷಿ ಉದ್ಯಮ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ನೀಲ್ ಕಮಲ್ ದರ್ಬಾರಿ ಅವರನ್ನು ರಾಸಾಯನಿಕ ಶಸ್ತ್ರಾಸ್ತ್ರಗಳ ರಾಷ್ಟ್ರೀಯ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಯುವ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ 1990ರ ಬ್ಯಾಚ್‌ನ ಅಧಿಕಾರಿ ಸಂಜಯ್ ಕುಮಾರ್, ಇಂಧನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎಸ್.ಕೆ.ಜಿ.ರಾಹಟೆ ಅವರಿಗೆ ಕಾರ್ಯದರ್ಶಿಯಾಗಿ ಬಡ್ತಿ ನೀಡಿ ಕಾನೂನು ಸಚಿವಾಲಯದಲ್ಲಿ ನ್ಯಾಯಾಂಗ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.