ADVERTISEMENT

ಹಿಂದಿನ ಸರ್ಕಾರಗಳಿಂದ ಧಾರ್ಮಿಕ ಕೇಂದ್ರಗಳ ನಿರ್ಲಕ್ಷ್ಯ: ಮೋದಿ

ಪಿಟಿಐ
Published 21 ಅಕ್ಟೋಬರ್ 2022, 14:02 IST
Last Updated 21 ಅಕ್ಟೋಬರ್ 2022, 14:02 IST
ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು –ಪಿಟಿಐ ಚಿತ್ರ   

ಡೆಹ್ರಾಡೂನ್‌: ದೇಶದಾದ್ಯಂತ ಇರುವ ಧಾರ್ಮಿಕ ಕೇಂದ್ರಗಳನ್ನು ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದು, ಈಗ ಅವುಗಳ ವೈಭವವನ್ನು ಮರುಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಕಾಶಿ ವಿಶ್ವನಾಥ ದೇವಾಲಯ, ಉಜ್ಜೈನಿ ಮತ್ತು ಅಯೋಧ್ಯೆಯಲ್ಲಿ ಈಚೆಗೆ ಪುನರ್‌ನಿರ್ಮಾಣ ಕಾರ್ಯಗಳು ನಡೆದಿರುವುದನ್ನು ಉದಾಹರಿಸಿದ ಅವರು, ಇವುಗಳ ನಿರ್ಲಕ್ಷ್ಯಕ್ಕೆ ‘ಗುಲಾಮ ಮನಸ್ಥಿತಿ’ಯೇ ಕಾರಣ ಎಂದಿದ್ದಾರೆ.

ಉತ್ತರಾಖಂಡದ ಭಾರತ–ಚೀನಾ ಗಡಿಯಲ್ಲಿರುವ ಮನ ಗ್ರಾಮದಲ್ಲಿ ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್‌ ರೋಪ್‌ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ನಮ್ಮ ಧಾರ್ಮಿಕ ಕೇಂದ್ರಗಳು ಕೇವಲ ಕಟ್ಟಡಗಳಲ್ಲ ಅವುಗಳು ನಮ್ಮ ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯ ಸಂಕೇತಗಳು’ ಎಂದು ಹೇಳಿದ್ದಾರೆ.

ADVERTISEMENT

‘ಹಿಮಾಲಯದ ತಪ್ಪಲಿನ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯು ಯಾತ್ರಿಕರಿಗೆ ಅನುಕೂಲ ಉಂಟುಮಾಡುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವನ್ನೂ ಸೃಷ್ಟಿಸಿದೆ. ಮತ್ತು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಿದೆ’ ಎಂದೂ ಮೋದಿ ತಿಳಿಸಿದ್ದಾರೆ.

‘ಹೇಮಕುಂಡ್‌ ಸಾಹಿಬ್‌ ಗುರುದ್ವಾರಕ್ಕೆ ರೋಪ್‌ವೇ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿರುವುದು ದೇಶದಲ್ಲಿ ಮಾತ್ರವಲ್ಲದೆ ಬ್ರಿಟನ್‌, ಜರ್ಮನಿ ಕೆನಡಾದಲ್ಲಿ ನೆಲೆಸಿರುವ ಸಿಖ್‌ ಸಮುದಾಯದವರಲ್ಲಿ ಹರ್ಷ ಉಂಟುಮಾಡಿದೆ ಎಂದಿದ್ದಾರೆ.

ಇದಕ್ಕೂ ಮೊದಲು ಮೋದಿ ಅವರು ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.