ನವದೆಹಲಿ: ಕೊರೊನಾ ಸೋಂಕಿನಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಹಲವರಲ್ಲಿ ಮೂಡಿದೆ.
ಇಂತಹ ಸಂದರ್ಭದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ಪ್ರತಿನಿಧಿಸುವ ಸಂಘಟನೆಯಾದ ಖಾಸಗಿ ಭದ್ರತಾ ಕೈಗಾರಿಕೆ ಕೇಂದ್ರೀಯ ಒಕ್ಕೂಟ(ಸಿಎಪಿಎಸ್ಐ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಜೀವನೋಪಾಯಕ್ಕೆ ನೆರವಾಗಲು ಆಗ್ರಹಿಸಿದೆ.
‘ಖಾಸಗಿ ಭದ್ರತಾ ಕ್ಷೇತ್ರದಲ್ಲಿ ಪ್ರಸ್ತುತ 85 ಲಕ್ಷ ಜನರು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕವಾಗಿ ಈ ಸಂಖ್ಯೆ ಶೇ 22 ರಷ್ಟು ಏರಿಕೆಯಾಗುತ್ತಿದೆ. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿ ಇದು ಗುರುತಿಸಿಕೊಂಡಿದೆ. ಮಾಲ್, ಶೋರೂಂ, ಚಿತ್ರಮಂದಿರಗಳು, ಹೋಟೆಲ್, ಕಾರ್ಪೊರೇಟ್ ಕಚೇರಿಗಳು ಮುಚ್ಚಿರುವುದರಿಂದ ಹೆಚ್ಚಿನ ಭದ್ರತಾ ಸಿಬ್ಬಂದಿ ಅಗತ್ಯವಿಲ್ಲ ಎಂದು ವಾಪಸ್ ಕಳುಹಿಸಲಾಗುತ್ತಿದೆ. ಕೆಲಸ ಮಾಡುವ ಸಿಬ್ಬಂದಿಗಷ್ಟೇ ವೇತನ ನೀಡುವುದಾಗಿ ಸಂಸ್ಥೆ, ಕಂಪನಿಗಳು ತಿಳಿಸುತ್ತಿವೆ. ಉಳಿದ ಸಿಬ್ಬಂದಿಗೆ ವೇತನ ಯಾರು ನೀಡುತ್ತಾರೆ?, ಅವರ ಕುಟುಂಬದ ಗತಿಯೇನು? ಇವರ ರಕ್ಷಣೆಗೆ ನೀವು ಮಧ್ಯಪ್ರವೇಶಿಸಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.