ನವದೆಹಲಿ: ಪ್ರವಾದಿ ಮಹಮ್ಮದ್ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸದಂತೆ ರಕ್ಷಣೆ ಕೋರಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿರುವುದಾಗಿ ಹೊಸ ಮನವಿಯಲ್ಲಿ ನ್ಯಾಯಾಲಯದ ಗಮನ ಸೆಳೆದಿರುವ ಅವರು, ದೇಶದ ವಿವಿಧೆಡೆ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸುವಂತೆ ನಿರ್ದೇಶನ ನೀಡುವಂತೆ ಮತ್ತೆ ಮನವಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠ ಜುಲೈ 1 ರಂದು ನೂಪುರ್ ಮನವಿಯನ್ನು ತಳ್ಳಿಹಾಕಿತ್ತು. ತಮ್ಮ ವಿರುದ್ಧದ ಎಫ್ಐಆರ್ಗಳನ್ನು ಒಂದೇ ಕಡೆಗೆ ವರ್ಗಾಯಿಸುವಂತೆ ಕೋರಿದ್ದ ಮನವಿ ತಿರಸ್ಕರಿಸಿದ್ದ ಕೋರ್ಟ್, ಹಿಡಿತವಿಲ್ಲದ ನಾಲಿಗೆ ದೇಶಕ್ಕೆ ಬೆಂಕಿ ಹಚ್ಚಿದೆ ಎಂದು ಕಿಡಿಕಾರಿತ್ತು. ಇದೀಗ, ಅದೇ ಅರ್ಜಿಯ ಮರುಪರಿಗಣನೆಗೆ ನೂಪುರ್ ಕೋರಿದ್ದಾರೆ.
ನೂಪುರ್ ಶರ್ಮಾ ಸಲ್ಲಿಸಿರುವ ಹೊಸ ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ.
ನ್ಯಾಯಾಲಯದ ಜಾಲತಾಣದಲ್ಲಿ ತಿಳಿಸಿರುವ ಪ್ರಕಾರ, ಕಳೆದ ಬಾರಿ ವಿಚಾರಣೆ ನಡೆಸಿದ್ದ ಪೀಠವೇ ನೂಪುರ್ ಅವರ ಹೊಸ ರ್ಜಿಯ ವಿಚಾರಣೆ ನಡೆಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.