ADVERTISEMENT

ಪತ್ರಕರ್ತೆ ನಾವಿಕ ವಿರುದ್ಧದ ಎಫ್‌ಐಆರ್‌ಗಳು ದೆಹಲಿಗೆ ವರ್ಗ: ಸುಪ್ರೀಂ ಅಸ್ತು

ಪಿಟಿಐ
Published 23 ಸೆಪ್ಟೆಂಬರ್ 2022, 8:04 IST
Last Updated 23 ಸೆಪ್ಟೆಂಬರ್ 2022, 8:04 IST
   

ನವದೆಹಲಿ: ಟಿ.ವಿ ಕಾರ್ಯಕ್ರಮದಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ, ಪ್ರವಾದಿ ಮಹಮ್ಮದ್ ಕುರಿತಂತೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಕರ್ತೆ ನಾವಿಕ ಕುಮಾರ್ ವಿರುದ್ಧದ ಎಲ್ಲ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ದೆಹಲಿ ಪೊಲೀಸರಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಕೃಷ್ಣ ಮುರಾರಿಯವರನ್ನು ಒಳಗೊಂಡ ಪೀಠವು, ಎಂಟು ವಾರಗಳ ಕಾಲ ನಾವಿಕ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ಜರುಗಿಸದಂತೆ ಸೂಚಿಸಿದೆ.

ಇದೇವೇಳೆ, ಪ್ರಮುಖ ಎಫ್‌ಐಆರ್‌ಗಳ ರದ್ದು ಕೋರಿ ದೆಹಲಿ ಹೈಕೋರ್ಟ್ ಮುಂದೆ ಮನವಿ ಸಲ್ಲಿಸಲು ನ್ಯಾಯಾಲಯ ಅವರಿಗೆ ಅನುಮತಿ ನೀಡಿದೆ..

ADVERTISEMENT

ಭವಿಷ್ಯದಲ್ಲಿ ನಾವಿಕ ವಿರುದ್ಧ ದಾಖಲಾಗುವ ಯಾವುದೇ ಎಫ್‌ಐಆರ್ ಅನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗುವುದು ಎಂದು ಪೀಠ ಹೇಳಿದೆ.

ದೆಹಲಿ ಪೊಲೀಸರ ಇಂಟೆಲಿಜೆನ್ಸ್ ಫ್ಯೂಶನ್ ಮತ್ತು ಸ್ಟ್ರಾಟೆಜಿಕ್ ಆಪರೇಶನ್ಸ್(ಐಎಫ್‌ಎಸ್‌ಒ) ಘಟಕವು ಈ ಎಫ್‌ಐಆರ್‌ಗಳ ತನಿಖೆ ನಡೆಸಲಿದೆ.

ಆಗಸ್ಟ್ 8ರಂದು ನಾವಿಕ ಅವರಿಗೆ ಬಂಧನದಿಂದ ರಕ್ಷಣೆ ಒದಗಿಸಿದ್ದ ಸುಪ್ರೀಂ ಕೋರ್ಟ್, ಕೇಂದ್ರ, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಇತರರಿಗೆ ನೋಟಿಸ್ ನೀಡಿತ್ತು.

ಪ್ರವಾದಿ ಮಹಮ್ಮದ್ ವಿರುದ್ಧದ ನೂಪುರ್ ಶರ್ಮಾ ಹೇಳಿಕೆಯು ದೇಶದಾದ್ಯಂತ ಭಾರಿ ಪ್ರತಿಭಟನೆಗೆ ಎಡೆಮಾಡಿತ್ತು. ಗಲ್ಫ್ ರಾಷ್ಟ್ರಗಳಿಂದಲೂ ಆಕ್ರೋಶ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.