ADVERTISEMENT

ಪ್ರಾಸಿಕ್ಯೂಷನ್‌ ಹೇಳುವ ವಿಷಯಕ್ಕೆ ಪ್ರಬಲ ಸಾಕ್ಷ್ಯ ಮುಖ್ಯ: ಎನ್‌ಐಎ ಕೋರ್ಟ್‌

ಐಆರ್‌ಎಫ್‌ನ ಮಾಜಿ ಉದ್ಯೋಗಿ ಖುರೇಷಿಯನ್ನು ದೋಷಮುಕ್ತಗೊಳಿಸಿ ಆದೇಶ

ಪಿಟಿಐ
Published 1 ಅಕ್ಟೋಬರ್ 2022, 11:15 IST
Last Updated 1 ಅಕ್ಟೋಬರ್ 2022, 11:15 IST
ಕೋರ್ಟ್‌
ಕೋರ್ಟ್‌   

ಮುಂಬೈ: ‘ಪ್ರಾಸಿಕ್ಯೂಷನ್‌ ಹೇಳುವ ವಿಷಯ ಆಕರ್ಷಕವಾಗಿರಬಹುದು. ಆದರೆ, ಆ ವಿಷಯಕ್ಕೆ ಪ್ರಬಲ ಸಾಕ್ಷ್ಯಗಳ ಬೆಂಬಲ ಇರಬೇಕಾದುದು ಮುಖ್ಯ’ ಎಂದು ವಿಶೇಷ ಎನ್‌ಐಎ ಕೋರ್ಟ್‌ ಹೇಳಿದೆ.

ಇಸ್ಲಾಮಿಕ್‌ ಬೋಧಕ ಝಾಕೀರ್‌ ನಾಯ್ಕ್ ನೇತೃತ್ವದ ಇಸ್ಲಾಮಿಕ್‌ ರಿಸರ್ಚ್ ಫೌಂಡೇಷನ್‌ನ (ಐಆರ್‌ಎಫ್‌) ಉದ್ಯೋಗಿ ಅರ್ಷಿ ಖುರೇಷಿ ಎಂಬುವವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದ ಕೋರ್ಟ್‌, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ವಿಶೇಷ ಎನ್‌ಐಎ ಕೋರ್ಟ್‌ ನ್ಯಾಯಾಧೀಶ ಎ.ಎಂ.ಪಾಟೀಲ ಅವರು, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಖುರೇಷಿ ಅವರನ್ನು ಶುಕ್ರವಾರ ದೋಷಮುಕ್ತಗೊಳಿಸಿದ್ದು, ಆದೇಶ ಪ್ರತಿಶನಿವಾರ ಲಭ್ಯವಾಗಿದೆ.

ADVERTISEMENT

ಐಎಸ್‌ಐಎಸ್‌ ಅನ್ನು ಸೇರುವಂತೆ ಯುವಕರಿಗೆ ಬೋಧಿಸುತ್ತಿದ್ದ ಆರೋಪದ ಮೇಲೆ ಖುರೇಷಿ ಅವರನ್ನು 2016ರಲ್ಲಿ ಬಂಧಿಸಲಾಗಿತ್ತು.

ಐಎಸ್‌ಐಎಸ್‌ನ ಸದಸ್ಯನೆನ್ನಲಾದ ಅಶ್ಫಾಕ್ ಮಜೀದ್‌ ನಾಪತ್ತೆಯಾಗಿದ್ದರ ಕುರಿತು ಆತನ ತಂದೆ ದೂರು ದಾಖಲಿಸಿದ್ದರು. ತಾನು ಐಎಸ್‌ಐಎಸ್‌ ಸಂಘಟನೆ ಸೇರಿದ್ದಾಗಿ ಮಜೀದ್‌ ತನ್ನ ಸಹೋದರಿಗೆ ತಿಳಿಸಿದ್ದ ಎನ್ನಲಾಗಿದೆ. ಈ ಕುರಿತು ತನಿಖೆ ಆರಂಭಿಸಿದ್ದ ಎನ್‌ಐಎ, ಖುರೇಷಿ ಅವರನ್ನು ಬಂಧಿಸಿತ್ತು.

ಐಆರ್‌ಎಫ್‌ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವ ಕೇಂದ್ರ ಸರ್ಕಾರ, ಸಂಘಟನೆಯನ್ನು 2016ರ ನವೆಂಬರ್‌ನಲ್ಲಿ ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.