ಚಂಡೀಗಢ: ಪಂಜಾಬ್ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಪರಿಣಾಮ ಈವರೆಗೂ 41 ಜನರು ಮೃತಪಟ್ಟಿದ್ದು, 1,616 ಶಿಬಿರಗಳಲ್ಲಿ ಜನರು ಆಶ್ರಯ ಪಡೆಯುತ್ತಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ತರ್ನ್ ತರನ್, ಫಿರೋಜ್ಪುರ್, ಫತೇಘರ್ ಸಾಹಿಬ್, ಫರೀದ್ಕೋಟ್, ಹೋಶಿಯಾರ್ಪುರ್, ರೂಪನಗರ, ಕಪುರ್ತಲಾ, ಪಟಿಯಾಲ, ಮೋಗಾ, ಲುಧಿಯಾನ, ಎಸ್ಎಎಸ್ ನಗರ, ಜಲಂಧರ್, ಸಂಗ್ರೂರ್, ಎಸ್ಬಿಎಸ್ ನಗರ, ಫಾಜಿಲ್ಕಾ, ಗುರುದಾಸ್ಪುರ್, ಮಾನ್ಸಾ, ಬಟಿಂಡಾ ಮತ್ತು ಪಠಾಣ್ಕೋಟ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಜಲಾವೃತ ಪ್ರದೇಶಗಳಿಂದ ಇದುವರೆಗೂ 27,286 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಮನೆಗಳು ಸೇರಿದಂತೆ ಕೃಷಿ ಭೂಮಿ ಜಲಾವೃತಗೊಂಡಿವೆ ಎಂದು ಇಂಧನ ಸಚಿವ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಮಳೆಯಿಂದ ಶ್ರೀರೂಪನಗರ, ಎಸ್ಎಎಸ್ ನಗರ, ಪಟಿಯಾಲ ಮತ್ತು ಸಂಗ್ರೂರ್ ಪ್ರದೇಶಗಳು ಹೆಚ್ಚು ಹಾನಿಗೆ ಒಳಗಾಗಿವೆ. ಪ್ರವಾಹದಿಂದ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ನ (ಪಿಎಸ್ಪಿಸಿಎಲ್) ಮೂಲಸೌಕರ್ಯಗಳ ವ್ಯವಸ್ಥೆಗೂ ನಷ್ಟ ಉಂಟಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಕೆಲವು ಕೆವಿ ಸ್ಟೇಷನ್ಗಳು ಜಲಾವೃತವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಪುನಃ ವಿದ್ಯುತ್ ಪೂರೈಸಲು ಪಿಎಸ್ಪಿಸಿಎಲ್ ಕಾರ್ಯಪಡೆಯು ಹಗಲಿರುಳು ಕೆಲಸ ಮಾಡಿದೆ ಎಂದು ಸಿಂಗ್ ಹೇಳಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.