ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶಿ ಪ್ರವಾಸಕ್ಕೆ ತೆರಳುವ ಬದಲು, ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿ ಎಂದು ಬಿಜೆಪಿ ಸಲಹೆ ನೀಡಿದೆ.
ರಾಹುಲ್ ಗಾಂಧಿ ಅವರು ಮಲೇಷ್ಯಾ ಪ್ರವಾಸಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಅವರ ಕಾಲೆಳಿದಿದೆ.
‘ರಜೆಯಲ್ಲಿ ವಿದೇಶಿ ಪ್ರವಾಸಕ್ಕೆ ತೆರಳುತ್ತಿರುವ ರಾಹುಲ್ ಗಾಂಧಿ ಅವರಿಗೆ ಶುಭಾಶಯಗಳು. ಕೆಲವೊಮ್ಮೆ ಸಾಮಾನ್ಯ ರಾಜಕಾರಣಿಯಾಗಿದ್ದರೆ, ನಾನು ತುಂಬಾ ಕೆಲಸ ಮಾಡಿದ್ದೇನೆ ಎಂದು ರಜೆ ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ಆದರೆ, ಸಾರ್ವಜನಿಕ ಜೀವನದಲ್ಲಿ ಯಾವುದೇ ವಿರಾಮಗಳು ಇರುವುದಿಲ್ಲ ಎಂದು ರಾಹುಲ್ ಅವರಿಗೆ ನೆನಪಿಸುತ್ತೇನೆ’ ಎಂದು ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಜನ ನಾಯಕನಾದವರು ಜನರ ಕಷ್ಟಗಳಿಗೆ ಸದಾ ಸ್ಪಂದಿಸಬೇಕಾಗುತ್ತದೆ. ಪಂಜಾಬ್ ಹಾಗೂ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿ ಸಂಕಷ್ಟದಲ್ಲಿರುವ ಜನರನ್ನು ರಾಹುಲ್ ಭೇಟಿಯಾಗಿದ್ದರೆ ಒಳ್ಳೆಯದಿತ್ತು ಎಂದಿದ್ದಾರೆ.
‘ಬಿಹಾರ ರಾಜಕಾರಣದ ಬಿಸಿ ತಾಳಲಾರದೆ ಕಾಂಗ್ರೆಸ್ನ ಯುವರಾಜರು ವಿದೇಶಿ ಪ್ರವಾಸ ಮಾಡುತ್ತಿದ್ದಾರೆಯೇ ಅಥವಾ ಯಾರಿಗೂ ತಿಳಿಯದ ರಹಸ್ಯ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆಯೇ’ ಎಂದು ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ.
ಜನರು ಪ್ರವಾಹದಿಂದ ಸಂಕಷ್ಟದಲ್ಲಿರುವಾಗ ರಾಹುಲ್ ಗಾಂಧಿ ಅವರು ರಜೆಗಾಗಿ ತೆರಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.