ADVERTISEMENT

ಭಾರತ್ ಜೋಡೊ ಯಾತ್ರೆಯ ಬಳಿಕ ಹೊಸ ಅವತಾರದಲ್ಲಿ ರಾಹುಲ್: ದಿಗ್ವಿಜಯ್

ಪಿಟಿಐ
Published 9 ಅಕ್ಟೋಬರ್ 2022, 10:23 IST
Last Updated 9 ಅಕ್ಟೋಬರ್ 2022, 10:23 IST
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್   

ತುರುವೆಕೆರೆ: ಭಾರತ್ ಜೋಡೊ ಯಾತ್ರೆಯ ಬಳಿಕ ನೀವೇಲ್ಲರೂ ರಾಹುಲ್ ಗಾಂಧಿ ಅವರನ್ನು ಹೊಸ ಅವತಾರದಲ್ಲಿ ನೋಡಲಿದ್ದೀರಿ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಭಾನುವಾರ ಹೇಳಿದ್ದಾರೆ.

ಕನ್ಯಾಕುಮಾರಿಯಿಂದ ಆರಂಭವಾದ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯು ಕರ್ನಾಟಕದ ಮೂಲಕ ಹಾದು ಹೋಗುತ್ತಿದೆ. ಇದರಲ್ಲಿ ಭಾಗವಹಿಸಿರುವ ದಿಗ್ವಿಜಯ್, ಈ ಯಾತ್ರೆಯು ಕಾಂಗ್ರೆಸ್ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಹಳ್ಳಿ ಹಳ್ಳಿಗೂ ತೆರಳಿ ಜನರ ಸಮಸ್ಯೆಗಳನ್ನು ರಾಹುಲ್ ಆಲಿಸುತ್ತಿದ್ದು, ಜನರು ಹೆಚ್ಚು ಪ್ರಭಾವಿತರಾಗಿದ್ದಾರೆ. ಹಲವು ವರ್ಷಗಳ ಬಳಿಕ ದೇಶದ ಅತ್ಯಂತ ಹಳೆಯದಾದ ಪಕ್ಷದ ಬಗ್ಗೆ ಚರ್ಚಿಸಲಾಗುತ್ತಿದೆ. ಇದರಿಂದ ಪಕ್ಷವನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ADVERTISEMENT

ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದರು. ಈಗ ರಾಹುಲ್ ಗಾಂಧಿ, ಬೆವರು ಸುರಿಸುತ್ತಿದ್ದಾರೆ. ಮಳೆಯಲ್ಲಿ ನೆನೆದಿದ್ದಾರೆ. ನಕಲಿ ಸುದ್ದಿ, ಮಾನನಷ್ಟ ಆರೋಪಗಳ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಭಾರತವನ್ನು ಒಗ್ಗೂಡಿಸುವ ಯಾತ್ರೆಯ ಸಂಕೇತವಾಗಿದ್ದಾರೆ ಎಂದು ಹೇಳಿದ್ದಾರೆ.

ನೀವೆಲ್ಲರೂ ರಾಹುಲ್ ಗಾಂಧಿ ಅವರನ್ನೀಗ ಹೊಸ ಅವತಾರದಲ್ಲಿ ನೋಡಲಿದ್ದೀರಿ. ಅವರನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ಆದಾಗ್ಯೂ ಪಕ್ಷದ ಸಿದ್ದಾಂತದ ಮೇಲಿನ ಬದ್ಧತೆ ಮತ್ತು ನಾಯಕತ್ವದ ಕೊರತೆಯನ್ನು ಕಾಂಗ್ರೆಸ್ ಎದುರಿಸುತ್ತಿದೆ. ಆದರೆ ಖಂಡಿತವಾಗಿಯೂ ಪಕ್ಷದಿಂದ ನಾಯಕತ್ವದ ಉಗಮವಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.