ಕಾಲ್ಕಾ (ಹರಿಯಾಣ): ಪಾಕಿಸ್ತಾನದ ಜತೆಗೆ ಭಾರತದ ನಿಲುವು ಕಠಿಣವಾಗಿಯೇ ಇರಲಿದೆ ಎಂಬ ಮತ್ತೊಂದು ಸಂದೇಶವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆ. ಆ ದೇಶದ ಜತೆಗೆ ಮಾತುಕತೆ ನಡೆಯುವುದಾದರೆ ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕುರಿತಂತೆ ಮಾತ್ರ ಎಂದು ಹೇಳಿದ್ದಾರೆ.
ಬಿಜೆಪಿಯ ಜನ ಆಶೀರ್ವಾದ ಯಾತ್ರೆಗೆ ಚಾಲನೆ ನೀಡಿ ರಾಜನಾಥ್ ಮಾತನಾಡಿದರು.
ಭಯೋತ್ಪಾದನೆಗೆ ನೆರವು ಮತ್ತು ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸಿದರೆ ಮಾತ್ರ ಮಾತುಕತೆ ಸಾಧ್ಯ. ಆ ದೇಶದ ಜತೆಗೆ ಯಾವ ವಿಚಾರದಲ್ಲಿ ಮಾತುಕತೆ ನಡೆಸಬೇಕು ಮತ್ತು ಏಕೆ ನಡೆಸಬೇಕು ಎಂದೂ ಅವರು ಪ್ರಶ್ನಿಸಿದ್ದಾರೆ.
ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿಯು ಪಾಕಿಸ್ತಾನವನ್ನು ದುರ್ಬಲಗೊಳಿಸಿದೆ ಮತ್ತು ಭಾರತದ ನಿಲುವು ಅವರ ಕಳವಳಕ್ಕೆ ಕಾರಣವಾಗಿದೆ ಎಂದೂ ರಕ್ಷಣಾ ಸಚಿವರು ಹೇಳಿದ್ದಾರೆ.
‘ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಆ ದೇಶವು ವಿವಿಧ ದೇಶಗಳ ಬಾಗಿಲು ತಟ್ಟುತ್ತಿದೆ. ನಾವು ಮಾಡಿದ ತಪ್ಪಾದರೂ ಏನು? ಜಗತ್ತಿನ ಅತ್ಯಂತ ಪ್ರಬಲ ರಾಷ್ಟ್ರ ಅಮೆರಿಕ ಕೂಡ ಪಾಕಿಸ್ತಾನದ ವಾದವನ್ನು ತಳ್ಳಿ ಹಾಕಿದೆ. ಭಾರತದ ಜತೆ ಮಾತುಕತೆ ಮಾಡಿ ಎಂದು ಸಲಹೆ ಕೊಟ್ಟಿದೆ’ ಎಂದು ಅವರು ವಿವರಿಸಿದ್ದಾರೆ.
ಬಾಲಾಕೋಟ್ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ವಾಯುದಾಳಿಯನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಲ್ಲಗಳೆದಿದ್ದರು. ಆದರೆ, ಬಾಲಾಕೋಟ್ಗಿಂತ ದೊಡ್ಡ ಮಟ್ಟದ ಕಾರ್ಯಾಚರಣೆಗೆ ಭಾರತ ಸಜ್ಜಾಗಿದೆ ಎಂದು ಅವರೇ ಇತ್ತೀಚೆಗೆ ಹೇಳಿದ್ದಾರೆ. ಹಾಗಾಗಿ, ಬಾಲಾಕೋಟ್ ದಾಳಿಯನ್ನು ಅವರು ಒಪ್ಪಿಕೊಂಡಂತಾಗಿದೆ ಎಂದು ರಾಜನಾಥ್ ಪ್ರತಿಪಾದಿಸಿದರು.
*ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ನಮ್ಮ 56 ಇಂಚು ಎದೆಯ ಪ್ರಧಾನಿ ತೋರಿಸಿಕೊಟ್ಟಿದ್ದಾರೆ
-ರಾಜನಾಥ್ ಸಿಂಗ್,ರಕ್ಷಣಾ ಸಚಿವ
*ಪಾಕ್ ಆಕ್ರಮಿತ ಕಾಶ್ಮೀರವು ಭಾರತಕ್ಕೆ ಸೇರ್ಪಡೆಯಾಗುವ ಮತ್ತು ಜನರು ಮುಜಫ್ಫರಾಬಾದ್ಗೆ ಮುಕ್ತವಾಗಿ ಹೋಗಬಹುದಾದ ದಿನ ಬರಲಿ ಎಂದು ನಾವು ಪ್ರಾರ್ಥಿಸೋಣ
-ಜಿತೇಂದ್ರ ಸಿಂಗ್, ಕೇಂದ್ರ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.