ADVERTISEMENT

ರಾಜಸ್ಥಾನ ರಾಜಕಾರಣ: ಸೋಮವಾರ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಗೆಹ್ಲೊಟ್ ವಿನಂತಿ

ಏಜೆನ್ಸೀಸ್
Published 24 ಜುಲೈ 2020, 7:55 IST
Last Updated 24 ಜುಲೈ 2020, 7:55 IST
ಸಚಿನ್ ಪೈಲಟ್
ಸಚಿನ್ ಪೈಲಟ್   

ಜೈಪುರ: 'ಮೇಲಿನವರ ಒತ್ತಡದಲ್ಲಿರುವ ರಾಜ್ಯಪಾಲರು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಹಿಂದೇಟು ಹಾಕುತ್ತಿದ್ದಾರೆ' ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು.

ಹೈಕೋರ್ಟ್‌ ತೀರ್ಪು ಹೊರಬಿದ್ದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು,'ರಾಜ್ಯಪಾಲರನ್ನು ಮತ್ತೊಮ್ಮೆ ಭೇಟಿಯಾಗಿ ಸೋಮವಾರವೇ ವಿಶೇಷ ಅಧಿವೇಶನ ಕರೆಯಲು ವಿನಂತಿಸುವುದಾಗಿ ತಿಳಿಸಿದರು.

ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ಆದೇಶ

ADVERTISEMENT

ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದಲ್ಲಿ ಬಂಡೆದ್ದಿರುವಕಾಂಗ್ರೆಸ್‌ನ 19 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ.

ವಿಧಾನಸಭೆ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಸುವ ಆದೇಶವನ್ನು ಪ್ರಶ್ನಿಸಿ ಭಿನ್ನಮತೀಯರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಇಂದ್ರಜಿತ್ ಮಹಂತಿ ಮತ್ತು ನ್ಯಾಯಮೂರ್ತಿ ಪ್ರಕಾಶ್ ಗುಪ್ತ ಅವರಿದ್ದ ನ್ಯಾಯಪೀಠವು ಮೇಲಿನಂತೆ ತೀರ್ಪು ನೀಡಿತು. ಕೇಂದ್ರ ಸರ್ಕಾರವನ್ನೂ ಪ್ರಕರಣದ ಕಕ್ಷಿದಾರ ಎಂದು ಪರಿಗಣಿಸಲು ಅವಕಾಶ ನೀಡಿತು.

ಸುಪ್ರೀಂ ಪ್ರಕರಣವನ್ನು ಇತ್ಯರ್ಥಪಡಿಸುವವರೆಗೆ ಪ್ರಕರಣದ ತೀರ್ಪು ನೀಡುವುದನ್ನು ಹೈಕೋರ್ಟ್‌ ಮುಂದೂಡಿತು.

ರಾಜಸ್ಥಾನದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ಶುಕ್ರವಾರ ಮತ್ತೊಂದು ತಿರುವು ಸಿಕ್ಕಿದೆ. ಪಕ್ಷಾಂತರ ನಿಷೇಧ ಕಾಯ್ದೆ ತಮಗೆ ಅನ್ವಯಿಸಲಿದೆಯೇ ಎಂಬ ವಿಚಾರದ ಬಗ್ಗೆ ತೀರ್ಪು ನೀಡುವ ಮೊದಲು ಕೇಂದ್ರ ಸರ್ಕಾರವನ್ನೂ ಪ್ರಕರಣದಲ್ಲಿ ಭಾಗಿದಾರ ಎಂದು ಪರಿಗಣಿಸಬೇಕೆಂಬ ಸಚಿನ್ ಪೈಲಟ್ ಅವರ ಕೊನೆಯ ಗಳಿಗೆಯ ಮನವಿಯನ್ನು ಪರಿಗಣಿಸಲು ಹೈಕೋರ್ಟ್‌ ಒಪ್ಪಿಕೊಂಡಿದೆ.

ವಿಧಾನಸಭೆ ಅಧಿವೇಷನ ಚಾಲ್ತಿಯಲ್ಲಿ ಇಲ್ಲದ ಸಮಯದಲ್ಲಿ ಸ್ಫೀಕರ್‌ಗೆ ಇಂಥ ನೊಟೀಸ್ ಜಾರಿ ಮಾಡುವಂತಿಲ್ಲ ಎಂದು ಬಂಡುಕೋರ ಶಾಸಕರು ನ್ಯಾಯಾಲಯದಲ್ಲಿ ವಾದ ಮಾಡಿದ್ದರು.

ಪಕ್ಷದ ಸದಸ್ಯತ್ವವನ್ನು ಸ್ವತಃ ತ್ಯಜಿಸಿದರೆ ಸ್ಪೀಕರ್‌ ಕ್ರಮ ತೆಗೆದುಕೊಳ್ಳಬಹುದು ಎಂಬ ನಿಯಮವನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. 'ನಮಗೆ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ಉದ್ದೇಶವಿಲ್ಲ. ನಾಯಕತ್ವದಲ್ಲಿ ಬದಲಾವಣೆ ಮಾತ್ರ ಬೇಕಿದೆ' ಎಂದು ಅವರು ನ್ಯಾಯಾಲಯದಲ್ಲಿ ತಿಳಿಸಿದ್ದರು.

ಹೈಕೋರ್ಟ್‌ ಆದೇಶಕ್ಕೆ ತಡೆ ಕೋರಿ ಸ್ಪೀಕರ್ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್‌, ಸೋಮವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ರಾಜಸ್ಥಾನ ಹೈಕೋರ್ಟ್‌ ನೀಡುವ ತೀರ್ಪು ಸಹ ತನ್ನ ಅಂತಿಮ ತೀರ್ಪಿಗೆ ಅನುಗುಣವಾಗಿರುತ್ತದೆ ಎಂದರು.

'ಸರ್ಕಾರಕ್ಕೆ ಬಹುಮತವಿದೆ, ಶೀಘ್ರ ವಿಧಾನಸಭೆ ಅಧಿವೇಶನ ಕರೆಯಲಾಗುವುದು. ಎಲ್ಲ ಕಾಂಗ್ರೆಸ್ ಶಾಸಕರೂ ಒಂದಾಗಿದ್ದೇವೆ' ಎಂದು ರಾಜ್ಯಪಾಲರ ಭೇಟಿಯ ನಂತರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.