ನವದೆಹಲಿ: ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪಿ ರಾಜೀವ್ ಸಕ್ಷೇನಾನನ್ನು ಪ್ರಮುಖ ಸಾಕ್ಷಿಯಾಗಿ ಪರಿವರ್ತಿಸಲು ದೆಹಲಿಯ ವಿಶೇಷ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ.
ಜಾರಿ ನಿರ್ದೇಶನಾಲಯದ ಪ್ರಕರಣಗಳವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅರವಿಂದಕುಮಾರ್ ಅನುಮತಿ ನೀಡಿದ್ದಾರೆ.
ಸೋಮವಾರ ವಿಶೇಷ ನ್ಯಾಯಾಲಯದ ಮುಂದೆ ಸಕ್ಷೇನಾ ಮನವಿ ಸಲ್ಲಿಸಿ ತನಗೆ ಕ್ಷಮಾಪಣೆ ನೀಡಬೇಕು ಎಂದು ಕೋರಿಕೆ ಸಲ್ಲಿಸಿದ್ದ. ಈ ಮನವಿಗೆ ಜಾರಿ ನಿರ್ದೇಶನಾಲಯ ಯಾವುದೇ ಆಕ್ಷೇಪಣೆ ಸಲ್ಲಿಸದೆ ಸಕ್ಷೇನಾ ಮನವಿಯನ್ನು ಬೆಂಬಲಿಸಿತ್ತು. ನ್ಯಾಯಾಲಯದಲ್ಲಿಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜೀವ್ ಸಕ್ಷೇನಾ ಹೇಳಿಕೆಯನ್ನು ಪರಿಶೀಲಿಸಬೇಕು ಮತ್ತು ಹಗರಣದಲ್ಲಿ ಈತನನ್ನು ಪ್ರಮುಖ ಸಾಕ್ಷಿಯನ್ನಾಗಿಸಬಹುದು ಎಂದು ತಿಳಿಸಿದರು ಎನ್ನಲಾಗಿದೆ.
ದುಬೈ ಮೂಲದ ವ್ಯಾಪಾರಿ ರಾಜೀವ್ ಸಕ್ಷೇನಾ ಸುಮಾರು 3,600 ಕೋಟಿ ರೂಗಳ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿಯಾಗಿದ್ದ ಎಂದುಆರೋಪಿಸಿತ್ತು. ಈ ಸಂಬಂಧ ಅರಬ್ ಪೊಲೀಸರು ಕಳೆದ ಜನವರಿ 30ರಂದು ಆರೋಪಿ ಸಕ್ಷೇನಾನನ್ನು ಆತನ ಮನೆಯಲ್ಲಿಯೇ ಬಂಧಿಸಿ ಅಂದೇ ರಾತ್ರಿ ಭಾರತದ ವಶಕ್ಕೆ ನೀಡಿದ್ದರು. ಅನಾರೋಗ್ಯದ ಕಾರಣ ಈತನಿಗೆ ಕಳೆದ ವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಾರಿ ನಿರ್ದೇಶನಾಲಯ ಈತನ ಜಾಮೀನಿಗೂ ಯಾವುದೇ ಆಕ್ಷೇಪಣೆ ಸಲ್ಲಿಸಿರಲಿಲ್ಲ.
ಹೆಲಿಕಾಪ್ಟರ್ ವಿನ್ಯಾಸ ಮತ್ತು ತಯಾರಿಕೆ ಸಂಸ್ಥೆಯಾಗಿರುವ ಅಗಸ್ಟಾ ವೆಸ್ಟ್ ಲ್ಯಾಂಡ್ರೋಮ್ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಭಾರತ ಬಹುಕೋಟಿ ರೂ ಬೆಲೆಯ ವಿವಿಐಪಿ ಹೆಲಿಕಾಪ್ಟರ್ಗಳನ್ನು ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯಿಂದಖರೀದಿಸುವಂತೆ ಮಾಡಲುರಾಜೀವ್ ಸಕ್ಷೇನಾ ಹಾಗೂ ಮತ್ತೊಬ್ಬ ವ್ಯಕ್ತಿ ಸೇರಿ ಇಲ್ಲಿನ ರಾಜಕಾರಣಿಗಳು, ವಾಯುಸೇನೆ ಅಧಿಕಾರಿಗಳು, ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಕೋಟ್ಯಂತರ ರುಪಾಯಿ ಹಣವನ್ನು ಲಂಚವನ್ನಾಗಿ ಕೊಟ್ಟಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.