ನವದೆಹಲಿ: ಚೀನಾದೊಂದಿಗೆ ಗಡಿ ಸಂಘರ್ಷದಲ್ಲಿ ಪ್ರಾಣ ತೆತ್ತ ಭಾರತದ ಯೋಧರ ಸಾವಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.ಸೋಮವಾರ ತಡರಾತ್ರಿ ಚೀನಾ ಜತೆ ನಡೆದ ಸಂಘರ್ಷದಲ್ಲಿ ಒಬ್ಬ ಕರ್ನಲ್ ಸೇರಿ ಸೇನೆಯ 20 ಯೋಧರು ಹುತಾತ್ಮರಾಗಿದ್ದರು.
ಸರಣಿ ಟ್ವೀಟ್ ಮಾಡಿರುವ ಅವರು, ‘ಭಾರತೀಯ ಯೋಧರು ಗಡಿ ರಕ್ಷಣೆ ವೇಳೆ ಅಪಾರ ಪರಾಕ್ರಮದಿಂದ ಹೋರಾಡಿ ಕೆಚ್ಚೆದೆ ಪ್ರದರ್ಶಿಸಿ ಜೀವ ಕಳೆದುಕೊಂಡಿದ್ದಾರೆ. ಅವರ ಶೌರ್ಯವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಮೃತಪಟ್ಟ ಯೋಧರ ಕುಟುಂಬದ ನೋವಿನಲ್ಲಿ ನಾವೂ ಭಾಗಿದಾರರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯೋಧರ ಕುಟುಂಬಕ್ಕೆ ಇಡೀ ದೇಶ ಹೆಗಲು ಕೊಡಲಿದೆ’ ಎಂದು ಭಾವುಕರಾಗಿ ನುಡಿದಿದ್ದಾರೆ.
‘ಲಡಾಖ್ ಗಡಿ ಪ್ರದೇಶದ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾದ ಕಡೆಯವರು ಮುಂದಾಗಿದ್ದರ ಫಲವೇಭಾರತ ಮತ್ತು ಚೀನಾ ಯೋಧರ ನಡುವೆ ಹಿಂಸಾತ್ಮಕ ಘರ್ಷಣೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿತ್ತು.
ನಾಥುಲಾದಲ್ಲಿ 1967ರ ಬಳಿಕ ನಡೆದ ಅತಿದೊಡ್ಡ ಸೇನಾ ಸಂಘರ್ಷ ಇದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.