ADVERTISEMENT

ರಾಜ್ಯಸಭೆ ಚುನಾವಣೆ: ಬಿಜೆಪಿಗೆ ಐದು, ಕಾಂಗ್ರೆಸ್‌ಗೆ ಮೂರು ಸ್ಥಾನ

ಗುಜರಾತ್‌ ಫಲಿತಾಂಶ ವಿಳಂಬ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 7:05 IST
Last Updated 20 ಜೂನ್ 2020, 7:05 IST
ಕೋವಿಡ್‌–19ಗೆ ತುತ್ತಾಗಿರುವ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಕುನಾಲ್‌ ಚೌಧರಿ ಪಿಪಿಇ ಕಿಟ್‌ ಧರಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು  –ಪಿಟಿಐ ಚಿತ್ರ   
ಕೋವಿಡ್‌–19ಗೆ ತುತ್ತಾಗಿರುವ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಕುನಾಲ್‌ ಚೌಧರಿ ಪಿಪಿಇ ಕಿಟ್‌ ಧರಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು  –ಪಿಟಿಐ ಚಿತ್ರ      

ನವದೆಹಲಿ: ರಾಜ್ಯಸಭೆಯ 19 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿಬಿಜೆಪಿ ಐದು ಸ್ಥಾನಗಳನ್ನು ಹಾಗೂಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದಜೋತಿರಾದಿತ್ಯ ಸಿಂಧಿಯಾ ಅನಾಯಾಸವಾಗಿ ರಾಜ್ಯಸಭೆಗೆ ಆಯ್ಕೆಯಾಗಿ ದ್ದಾರೆ.ರಾಜಸ್ಥಾನದಲ್ಲಿ ಆಪರೇಷನ್‌ ಕಮಲದ ಆತಂಕದಲ್ಲಿದ್ದ ಕಾಂಗ್ರೆಸ್‌ ಎರಡು ಸ್ಥಾನಗಳನ್ನು ಗಳಿಸುವ ಮೂಲಕ ನಿಟ್ಟುಸಿರು ಬಿಟ್ಟಿದೆ. ಮತದಾನ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿರುವ ಕಾರಣ ಗುಜರಾತ್‌ನಲ್ಲಿ ಫಲಿತಾಂಶವನ್ನು ಚುನಾವಣಾ ಆಯೋಗ ಇನ್ನಷ್ಟೇ ಪ್ರಕಟಿಸಬೇಕಿದೆ.

ಗುಜರಾತ್‌ನಲ್ಲಿ ಪಕ್ಷದ ಶಾಸಕರ ರಾಜೀನಾಮೆಯಿಂದ ಆಘಾತ ಅನುಭವಿಸಿರುವ ಕಾಂಗ್ರೆಸ್‌ಗೆ, ಮತದಾನದ ವೇಳೆಯೂ ಮತ್ತೊಂದು ಆಘಾತ ಕಾದಿತ್ತು. ಭಾರತೀಯ ಟ್ರೈಬಲ್‌ ಪಕ್ಷದ ಇಬ್ಬರು ಶಾಸಕರು ಮತದಾನದಿಂದ ದೂರು ಉಳಿದಿದ್ದು, ಬಿಜೆಪಿಗೆ ಮತ್ತಷ್ಟು ಸಹಕಾರಿಯಾಯಿತು. ಬಿಜೆಪಿಯ ಅಭಯ್‌ ಭಾರಧ್ವಾಜ್‌ ಹಾಗೂ ರಮಿಳ ಬರ ಹಾಗೂ ಕಾಂಗ್ರೆಸ್‌ನ ಶಕ್ತಿಸಿನ್ಹಾ ಗೋಹಿಲ್‌ ಅನಾಯಾಸವಾಗಿ ಗೆಲ್ಲುವ ಸಾಧ್ಯತೆ ಇದ್ದು, ಬಿಜೆಪಿ ನರ್ಹರಿ ಅಮಿನ್ ಹಾಗೂ ಕಾಂಗ್ರೆಸ್‌ನ ಭರತ್‌ಸಿನ್ಹಾ ಸೋಲಂಕಿ ನಡುವೆ ಹಣಾಹಣಿ ಇದೆ.

ADVERTISEMENT

ಮಧ್ಯಪ್ರದೇಶದಲ್ಲಿ ಬಿಜೆಪಿಯ ಸುಮೀರ್‌ ಸಿಂಗ್, ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಎರಡನೇ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ರಾಜಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ನೀರಜ್ ದಾಂಗಿ ಹಾಗೂ ಬಿಜೆಪಿಯ ರಾಜೇಂದ್ರ ಗೆಹ್ಲೋಟ್‌ ಆಯ್ಕೆಯಾದರು. ಬಿಜೆಪಿಯ ಎರಡನೇ ಅಭ್ಯರ್ಥಿ ಓಂಕಾರ್‌ ಸಿಂಗ್‌ ಲಾಖಾವತ್‌ ಅಗತ್ಯ ಮತಗಳನ್ನು ಪಡೆಯುವಲ್ಲಿ ವಿಫಲರಾದರು.

ನಾಲ್ಕೂ ಸ್ಥಾನ ಗೆದ್ದ ವೈಎಸ್‌ಆರ್‌ಸಿಪಿ:ಆಂಧ್ರಪ್ರದೇಶದ ನಾಲ್ಕೂ ಸ್ಥಾನಗಳನ್ನು ವೈಎಸ್‌ಆರ್‌ಸಿಪಿ ಗೆದ್ದುಕೊಂಡಿದೆ. ಸಚಿವರಾಗಿದ್ದ ಮೋಪಿದೇವಿ ವೆಂಕಟರಮಣ, ಪಿಳ್ಳಿ ಸುಭಾಷ್‌ ಚಂದ್ರ ಬೋಸ್‌, ಕೈಗಾರಿಕೋದ್ಯಮಿಗಳಾದ ಅಲ್ಲ ಅಯೋಧ್ಯ ರಾಮಿ ರೆಡ್ಡಿ ಹಾಗೂ ಪರಿಮಳ ನಥವಾಣಿ ರಾಜ್ಯಸಭೆ ಪ್ರವೇಶಿಸಿದರು.

ಪಕ್ಷದ ಮುಖ್ಯಸ್ಥರು ರಾಜ್ಯಸಭೆಗೆ:ಜಾರ್ಖಂಡ್‌ನಲ್ಲಿ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್‌(30) ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೀಪಕ್‌ ಪ್ರಕಾಶ್(31) ಗೆದ್ದಿದ್ದಾರೆ. ‌ಕಾಂಗ್ರೆಸ್‌ ಅಭ್ಯರ್ಥಿ ಶಹಜಾದ್‌ ಅನ್ವರ್ ಕೇವಲ 18 ಮತಗಳನ್ನು ಪಡೆದರು. ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಸೊರೇನ್‌, ರಾಜ್ಯಸಭೆಗೆ ಮೂರನೇ ಬಾರಿ ಆಯ್ಕೆಯಾಗುತ್ತಿದ್ದಾರೆ.

ಈಶಾನ್ಯ ರಾಜ್ಯಗಳಾದ ಮಣಿಪುದಲ್ಲಿ ಬಿಜೆಪಿ ಅಭ್ಯರ್ಥಿ ಲಿಸೆಂಬಾ ಸಂಜೊಬಾ,ಮೇಘಾಲಯದಲ್ಲಿ ನ್ಯಾಷನಲ್‌ ಪೀಪಲ್ಸ್‌ ಪಕ್ಷದ ವ್ಯಾನ್‌ವಿರಾಯ್‌ ಖರ್ಲುಖಿ ಗೆದ್ದರೆ, ಮಿಜೊರಾಂನಿಂದ ಮಿಜೊ ನ್ಯಾಷನಲ್‌ ಫ್ರಂಟ್‌ನ ಅಭ್ಯರ್ಥಿ ಕೆ.ಕನ್ಲಾವೆನ ರಾಜ್ಯಸಭೆ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.