ADVERTISEMENT

ಕೊರೊನಾ ಮಧ್ಯೆ ದಾಖಲೆ ರಸಗೊಬ್ಬರ ಪೂರೈಕೆ: ಸದಾನಂದಗೌಡಗೆ ಉಪರಾಷ್ಟ್ರಪತಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 4:10 IST
Last Updated 13 ಫೆಬ್ರುವರಿ 2021, 4:10 IST
   

ನವದೆಹಲಿ: ಕೊರೊನಾ ಸಂಕಷ್ಟದ ಮಧ್ಯೆಯೂ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರಸಗೊಬ್ಬರ ಪೂರೈಕೆ ಶೇಕಡಾ 25ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಉಕ್ರವಾರ ಪ್ರಶ್ನೋತ್ತರ ವೇಳೆ ಜಿ ಬಿ ಎಲ್‌ ನರಸಿಂಹರಾವ್‌ ಅವರು ಕೇಳಿದ ಪೂರಕ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕೊರೊನಾದಿಂದಾಗಿ ರಸಗೊಬ್ಬರ ಉತ್ಪಾದನೆ ಮತ್ತು ಸಾಗಣೆ ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಕೆಲಸಗಾರರ ಪೈಕಿ ಯಾರಿಗಾದರು ಕೊರೊನಾ ಸೋಂಕು ತಗುಲಿದರೆ ಇಡೀ ಫ್ಯಾಕ್ಟರಿಯನ್ನೇ ಮುಚ್ಚಬೇಕಾದ ಪರಿಸ್ಥಿತಿ ಇತ್ತು. ಅದೇ ರೀತಿ ಸಾಗಣೆ ಮಾಡುವಾಗ, ಲೋಡ್‌, ಅನ್‌ಲೋಡ್‌ ಮಾಡುವಾಗ ಕಾರ್ಮಿಕರ ಕೊರತೆ ಎದುರಾಗಿತ್ತು. ಆದರೆ ಇವನ್ನೆಲ್ಲ ಸಮರ್ಪಕವಾಗಿ ನಿಭಾಯಿಸಲಾಯಿತು.

ಅತಿವೃಷ್ಟಿಯಿಂದ ಕೆರೆ-ಕುಂಟೆಗಳು, ನೀರಾವರಿ ಜಲಾಶಯಗಳು ತುಂಬಿದವು. ಬಿತ್ತನೆ ಪ್ರದೇಶ ವೃದ್ಧಿಸಿ ರಸಗೊಬ್ಬರ ಬೇಡಿಕೆಯೂ ಹೆಚ್ಚಾಯಿತು. ಹೆಚ್ಚಾದ ಬೇಡಿಕೆಯನ್ನು ಪೂರೈಸಿ ಎಲ್ಲಿಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಕೃಷಿ ವಲಯ ಶೇ. 3.7 ರಷ್ಟು ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು ಎಂದು ಸಚಿವರು ವಿವರಿಸಿದರು.

ADVERTISEMENT

ಇದಕ್ಕೆ ಮೊದಲು ವಿಜಯಸಾಯಿ ರೆಡ್ಡಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಆಂಧ್ರ ಪ್ರದೇಶದಲ್ಲಿಯೂ ರಸಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೋಳ್ಳಲಾಗಿದೆ ಎಂದರು.

ಪ್ರತಿ ಹಂಗಾಮು ಶುರುವಾಗುವುದಕ್ಕೆ ಸಾಕಷ್ಟು ಮುಂಚಿತವಾಗಿಯೇ ನಮ್ಮ ಇಲಾಖೆಯು ಪ್ರತಿಯೊಂದು ರಾಜ್ಯಗಳ ಬೇಡಿಕೆಯ ವಿವರ ಪಡೆದು ಅದರ ಪ್ರಕಾರವೇ ವಿವಿಧ ನಮೂನೆಯ ರಸಗೊಬ್ಬರಗಳನ್ನು ಸರಬರಾಜಿಗೆ ವ್ಯವಸ್ಥೆ ಮಾಡುತ್ತದೆ. ಪ್ರತಿವಾರವೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲ ರಾಜ್ಯಗಳ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಇದಲ್ಲದೆ, ಯಾವ-ಯಾವ ರಾಜ್ಯಗಳಲ್ಲಿ ಯಾವ-ಯಾವ ನಮೂನೆಯ ರಸಗೊಬ್ಬರಗಳು ಎಷ್ಟೆಷ್ಟು ಇವೆ ಎಂಬುದನ್ನು ನಮ್ಮ ಆನ್ ಲೈನ್‌ ಡ್ಯಾಷ್‌ಬೋರ್ಡ್ ʼಸಂಯೋಜಿತ ರಸಗೊಬ್ಬರ ಪರಿಶೀಲನಾ ವ್ಯವಸ್ಥೆ (ಐಎಫ್‌ಎಂಎಸ್) ಮೂಲಕ ಪ್ರತಿದಿನವೂ ಪರಿಶೀಲಿಸಲಾಗುತ್ತದೆ ಮತ್ತು ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಸದಾನಂದ ಗೌಡ ವಿವರಿಸಿದರು.

ವಿಜಯಸಾಯಿ ರೆಡ್ಡಿ ಅವರ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಸಚಿವರು ಆಂಧ್ರಪ್ರದೇಶದಲ್ಲಿ ಯಾವುದೇ ನಮೂನೆಯ ಗೊಬ್ಬರ ಕೊರತೆಯಾಗಿಲ್ಲ, ರಾಜ್ಯಕ್ಕೆ (ಎಪಿ) ಪ್ರಸಕ್ತ ಸಾಲಿನಲ್ಲಿ (2020-21) ಇದುವರೆಗೆ 17.5 ಲಕ್ಷ ಟನ್‌ ಯೂರಿಯಾ, 4 ಲಕ್ಷ ಟನ್‌ ಡಿಎಪಿ, 2.8 ಲಕ್ಷ ಟನ್‌ ಎಂಓಪಿ ಹಾಗೂ 13.5 ಲಕ್ಷ ಟನ್‌ ಎನ್‌ಪಿಕೆ ನಮೂನೆ ರಸಗೊಬ್ಬರ ಪೂರೈಕೆಯಾಗಿದೆ ಎಂದು ವಿವರಿಸಿದರು.

ಸಭಾಪೀಠದಲ್ಲಿದ್ದ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ಕೊರೊನಾ ಸಾಂಕ್ರಮಿಕದ ಮಧ್ಯೆಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡ ಸಚಿವ ಡಿ ವಿ ಸದಾನಂದ ಗೌಡರನ್ನು ಅಭಿನಂದಿಸಿದರು. ಸದಸ್ಯ ಜಿ ಬಿ ಎಲ್‌ ನರಸಿಂಹ ರಾವ್‌ ಅವರೂ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.