ADVERTISEMENT

ಕಾಶ್ಮೀರದಲ್ಲಿ ನಿರ್ಬಂಧ ಸಡಿಲ, ಭದ್ರತಾ ಪಡೆ ನಿಯೋಜನೆ

ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನದ ನಂತರ ವಿಧಿಸಿದ್ದ ನಿರ್ಬಂಧ

ಪಿಟಿಐ
Published 5 ಸೆಪ್ಟೆಂಬರ್ 2021, 12:05 IST
Last Updated 5 ಸೆಪ್ಟೆಂಬರ್ 2021, 12:05 IST
ಕಾಶ್ಮೀರದ ಶ್ರೀನಗರದಲ್ಲಿ ಭಾನುವಾರ ಭಾರತೀಯ ಅರೆಸೇನಾ ಪಡೆಯ ಸಿಬ್ಬಂದಿಯೊಬ್ಬರು ಕಾರಿನ ತಪಾಸಣೆ ನಡೆಸಿದರು –ಎಎಫ್‌ಪಿ ಚಿತ್ರ
ಕಾಶ್ಮೀರದ ಶ್ರೀನಗರದಲ್ಲಿ ಭಾನುವಾರ ಭಾರತೀಯ ಅರೆಸೇನಾ ಪಡೆಯ ಸಿಬ್ಬಂದಿಯೊಬ್ಬರು ಕಾರಿನ ತಪಾಸಣೆ ನಡೆಸಿದರು –ಎಎಫ್‌ಪಿ ಚಿತ್ರ   

ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ನಿಧನದ ನಂತರ ಸಂಭಾವ್ಯ ಅಹಿತಕರ ಘಟನೆಗಳನ್ನು ತಡೆಯುವುದಕ್ಕಾಗಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಭಾನುವಾರ ತೆರವುಗೊಳಿಸಲಾಗಿದೆ. ಆದರೆ, ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕಣಿವೆಯಲ್ಲಿ ಜನರ ಓಡಾಟಕ್ಕೆ ಯಾವುದೇ ನಿರ್ಬಂಧಗಳಿಲ್ಲ, ಆದರೆ ಶೋಕಾಚರಣೆಯ ನಿಮಿತ್ತ ಇಲ್ಲಿನ ಹೈದರ್‌ಪೋರಾದಲ್ಲಿರುವ ಗಿಲಾನಿಯವರ ನಿವಾಸಕ್ಕೆ ಹೋಗುವ ರಸ್ತೆಗಳ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಗರ ಮತ್ತು ಇತರೆಡೆಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ’ಎಂದು ಅವರು ಹೇಳಿದ್ದಾರೆ.

‘ಜನಸಂಚಾರ ಹೆಚ್ಚಾಗಿದೆ. ನಗರ ಪ್ರದೇಶ ಸೇರಿದಂತೆ ಕಣಿವೆಯ ಇತರ ಭಾಗಗಳಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ. ಪರಿಸ್ಥಿತಿ ಸಾಮಾನ್ಯವಾಗಿದ್ದು, ನಿಯಂತ್ರಣದಲ್ಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ದುಷ್ಕರ್ಮಿಗಳ ಪ್ರಚೋದನೆಗೆ ನಕಲಿ ಸುದ್ದಿ, ವಿಡಿಯೊ ಬಳಕೆ

‘ಪಾಕಿಸ್ತಾನದ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಕಾಶ್ಮೀರದ ಕೆಲ ಸ್ಥಳೀಯ ಸುದ್ದಿಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಶಾಂತಿ ಕದಡುವ ಉದ್ದೇಶದಿಂದ ದುಷ್ಕರ್ಮಿಗಳನ್ನು ಪ್ರಚೋದಿಸಲು ನಕಲಿ ಸುದ್ದಿ ಮತ್ತು ವಿಡಿಯೊಗಳನ್ನು ಹರಿಬಿಡುತ್ತಿವೆ. ಈ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಶುಕ್ರವಾರ ರಾತ್ರಿ ಧ್ವನಿ ಕರೆ ಮತ್ತು ಸ್ಥಿರ ಅಂತರ್ಜಾಲ ಸೇವೆಗಳನ್ನು ಮರುಸ್ಥಾಪಿಸಲಾಗಿದೆ. ಆದರೆ, ಮೊಬೈಲ್ ಅಂತರ್ಜಾಲ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಪರಿಶೀಲನಾ ಸಭೆಯ ನಂತರ ಈ ಸೇವೆಯನ್ನು ಮರುಸ್ಥಾಪಿಸಲಾಗುವುದು’ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.