ADVERTISEMENT

ಕೇರಳ ಬಜೆಟ್: ಟಿಡಿಬಿಗೆ ₹100 ಕೋಟಿ ಅನುದಾನ

ಪಿಟಿಐ
Published 31 ಜನವರಿ 2019, 20:30 IST
Last Updated 31 ಜನವರಿ 2019, 20:30 IST
   

ತಿರುವನಂತಪುರ: ಶಬರಿಮಲೆ ದೇಗುಲದ ಆಡಳಿತ ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಕೇರಳ ಸರ್ಕಾರ 2019–20ರ ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಮೀಸಲಿರಿಸಿದೆ.

ಗುರುವಾರ ಬಜೆಟ್ ಮಂಡಿಸಿದಹಣಕಾಸು ಸಚಿವ ಟಿ.ಎಂ. ಥಾಮಸ್ ಇಸಾಕ್ ಅವರು ಅನುದಾನ ಘೋಷಿಸಿದ ವೇಳೆ, ‘ಶಬರಿಮಲೆ ದೇಗುಲದ ಆದಾಯವನ್ನು ಸರ್ಕಾರ ಕೊಳ್ಳೆ ಹೊಡೆಯುತ್ತಿದೆ ಎಂದು ಭಕ್ತರ ಸೋಗಿನಲ್ಲಿ ಕೆಲವು ರಾಜಕಾರಣಿಗಳು ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ.ಸುಳ್ಳು ಸುದ್ದಿ ಹರಡಿ,ಭಕ್ತರು ದೇಗುಲಕ್ಕೆ ಕಾಣಿಕೆ ಸಲ್ಲಿಸುವುದನ್ನು ತಡೆಯುವ ಮೂಲಕ ದೇವಸ್ವಂ ಆಡಳಿತ ಅಸ್ಥಿರಗೊಳಿಸುವುದು ಇವರ ಉದ್ದೇಶ. ಆದರೆ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲ’ಎಂದು ರಾಜಕಾರಣಿಗಳ ವಿರುದ್ಧ ಕಿಡಿಕಾರಿದ್ದಾರೆ.

ಆಗಸ್ಟ್‌ನಲ್ಲಿ ಸಂಭವಿಸಿದ ಪ್ರವಾಹ ಹಾಗೂ ಈಚೆಗೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಕಾರ್ಯಕರ್ತರು ಹಾಗೂ ಭಕ್ತಾದಿಗಳ ನಡುವೆ ನಡೆದ ಸಂಘರ್ಷ, ಪ್ರತಿಭಟನೆಗಳಿಂದಾಗಿ ದೇಗುಲದ ‘ಹುಂಡಿ’ ಗಳಿಕೆ ಹಾಗೂ ಪ್ರಸಾದ ಮಾರಾಟದ ಆದಾಯ ₹100 ಕೋಟಿ ಇಳಿಕೆಯಾಗಿದೆ. ಇದರಿಂದಾಗಿ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಟಿಡಿಬಿ ಮನವಿ ಮಾಡಿತ್ತು.

ADVERTISEMENT

‘ದೇಗುಲದಿಂದ ಸರ್ಕಾರ ಒಂದು ಪೈಸೆಯನ್ನೂ ಪಡೆದುಕೊಂಡಿಲ್ಲ. ಬದಲಿಗೆ ತಿರುಪತಿ ಮಾದರಿಯಲ್ಲಿ ಶಬರಿಮಲೆಯಲ್ಲಿ ಭಕ್ತರಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಿದೆ.ಬೇಸ್‌ ಕ್ಯಾಂಪ್‌ಗಳಾದ ನಿಲಕ್ಕಲ್, ಪಂಪಾದಲ್ಲಿ ಆಧುನಿಕ ಸೌಕರ್ಯಗಳನ್ನು ಒದಗಿಸಲು ಕೇರಳ ಮೂಲಸೌಕರ್ಯ ನಿಧಿ ಮಂಡಳಿ (ಕೆಐಐಎಫ್‌ಬಿ), ₹141.75 ಕೋಟಿ ಮೌಲ್ಯದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.