ಬಂಧನ
(ಪ್ರಾತಿನಿಧಿಕ ಚಿತ್ರ)
ಪತ್ತನಂತಿಟ್ಟ(ಕೇರಳ): ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಆಡಳಿತಾಧಿಕಾರಿ ಬಿ.ಮುರಳಿಬಾಬು ಅವರನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಚಿನ್ನ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯು(ಟಿಡಿಬಿ) ಬಾಬು ಅವರನ್ನು ಅಮಾನತು ಮಾಡಿತ್ತು. ಬುಧವಾರ ರಾತ್ರಿ ಚಂಗನಶ್ಶೇರಿಯಲ್ಲಿರುವ ಅವರ ನಿವಾಸದಿಂದಲೇ ಬಾಬು ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಬಾಬು ಅವರನ್ನು ವಿಚಾರಣೆಗಾಗಿ ತಿರುವನಂತಪುರಂನ ಅಪರಾಧ ಶಾಖೆ ಕಚೇರಿಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 10ರ ಸುಮಾರಿಗೆ, ಎಸ್ಐಟಿ ಬಾಬು ಅವರ ಬಂಧನವನ್ನು ದಾಖಲಿಸಿಕೊಂಡು ಸಂಬಂಧಿಕರಿಗೆ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ. ನಂತರ ಸಂಬಂಧಿಕರಿಗೆ ಬಾಬು ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಸಂಜೆ ಇಲ್ಲಿನ ಪತ್ತನಂತಿಟ್ಟದಲ್ಲಿರುವ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಬಾಬು ಅವರನ್ನು ಎಸ್ಐಟಿ ಹಾಜರುಪಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಗಾಗಿ ಬಾಬು ಅವರನ್ನು ವಶಕ್ಕೆ ಪಡೆಯಲು ಎಸ್ಐಟಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ದೇವಾಲಯದ ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹಗಳ ಚಿನ್ನದ ಹೊದಿಕೆಯ ತಟ್ಟೆಗಳು ಮತ್ತು ಶ್ರೀಕೋವಿಲ್ (ಗರ್ಭಗುಡಿ) ಬಾಗಿಲು ಚೌಕಟ್ಟುಗಳಿಂದ ಚಿನ್ನ ನಾಪತ್ತೆಯಾದ ಎರಡು ಪ್ರಕರಣಗಳಲ್ಲಿ ಅವರು ಆರೋಪಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.