ADVERTISEMENT

ಶಬರಿಮಲೆ ಹಿಂಸಾಚಾರದಲ್ಲಿ ಭಾಗಿಯಾದವರನ್ನು ಮಾತ್ರ ಬಂಧಿಸಿ: ಕೇರಳ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 13:03 IST
Last Updated 26 ಅಕ್ಟೋಬರ್ 2018, 13:03 IST
   

ಕೊಚ್ಚಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರಪ್ರವೇಶವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಹಿಂಸಾಚಾರದಲ್ಲಿ ಭಾಗಿಯಾದವರ ಫೋಟೊಗಳನ್ನು ಪ್ರಕಟಿಸಿದ ಕೇರಳ ಪೊಲೀಸರುಇಲ್ಲಿಯವರೆಗೆ 1407 ಮಂದಿಯನ್ನು ಬಂಧಿಸಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರ ಇನ್ನಷ್ಟು ಫೋಟೊಗಳನ್ನು ಪ್ರಕಟಿಸುವುದಾಗಿ ಕೇರಳ ಪೊಲೀಸ್ ಇಲಾಖೆ ಹೇಳಿದೆ.
ಏತನ್ಮಧ್ಯೆ, ಹಿಂಸಾಚಾರಗಳಲ್ಲಿ ಭಾಗಿಯಾದವರನ್ನು ಮಾತ್ರ ಬಂಧಿಸಿದರೆ ಸಾಕು. ಫೋಟೊಗಳನ್ನು ಪ್ರಕಟಿಸಿ ಗ್ಯಾಲರಿ ಮಾಡುವುದರಲ್ಲಿ ಮಾತ್ರ ಆಸಕ್ತಿ ವಹಿಸಬೇಡಿ ಎಂದು ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 2000ಕ್ಕಿಂತಲೂ ಹೆಚ್ಚು ವ್ಯಕ್ತಿಗಳ ಫೋಟೊಗಳನ್ನು ತಾವು ಸೆರೆ ಹಿಡಿದಿದ್ದೇವೆ ಎಂದು ಪೊಲೀಸರು ಹೇಳಿದ್ದಕ್ಕೆ ಹೈಕೋರ್ಟ್ ಈ ರೀತಿ ಪ್ರತಿಕ್ರಿಯಿಸಿದೆ.

ಹಿಂಸಾಚಾರದಲ್ಲಿ ಭಾಗಿಯಾಗದೇ ಇದ್ದವರನ್ನು ಬಂಧಿಸಬೇಡಿ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ.ಆದರೆ ಜನರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಬಂಧನ ಕಾರ್ಯ ಬೇಡ, ಬಂಧನ ವಿಷಯದಲ್ಲಿ ಸರ್ಕಾರ ತಪ್ಪೆಸಗಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾದೀತು ಎಂದು ಹೈಕೋರ್ಟ್ ಗುಡುಗಿದೆ.

ADVERTISEMENT

ಅಯ್ಯಪ್ಪ ಭಕ್ತರ ಫೋಟೊಗಳನ್ನು ಪ್ರಕಟಿಸಿ ಅವರನ್ನು ಬಂಧಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಶಬರಿಮಲೆ ಆಚಾರ ಸಂರಕ್ಷಣ ಸಮಿತಿ ಅಧ್ಯಕ್ಷ ಅನೋಜ್ ಕುಮಾರ್ ಮತ್ತು ಪಂಪಾ ನಿವಾಸಿ ಸುರೇಶ್ ಕುಮಾರ್ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿ ಹೈಕೋರ್ಟ್ ಈ ರೀತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.