ಶಬರಿಮಲೆ: ತುಲಾ ಮಾಸ ಪೂಜೆ ಪೂರ್ಣಗೊಂಡ ನಂತರ ಇಂದು ರಾತ್ರಿ 10 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ಸಂಜೆ 7 ಗಂಟೆಯ ನಂತರ ಅಯ್ಯಪ್ಪ ಭಕ್ತರಿಗೆ ಸನ್ನಿಧಾನಕ್ಕೆ ಪ್ರವೇಶವಿರುವುದಿಲ್ಲ.
ಇಂದು ರಾತ್ರಿ ಬಾಗಿಲು ಮುಚ್ಚಿದ ನಂತರ ನವೆಂಬರ್ 5ನೇ ತಾರೀಖು ಸಂಜೆ 5 ಗಂಟೆಗೆ ಮತ್ತೆ ದೇವಾಲಯದ ಬಾಗಿಲು ತೆರೆಯಲಾಗುವುದು. 6 ನೇ ತಾರೀಖು ರಾತ್ರಿ 10ನೇ ತಾರೀಖು ಮತ್ತೆ ಮುಚ್ಚಲಾಗುವುದು. ಇದಾದ ನಂತರನವೆಂಬರ್ 16 ಸಂಜೆ 5 ಗಂಟೆಗೆ ಮಂಡಲ ಪೂಜೆಗಾಗಿ ಬಾಗಿಲು ತೆರೆಯಲಿದೆ.ಡಿಸೆಂಬರ್ 27ರ ವರೆಗೆ ಮಂಡಲಪೂಜೆ ನಡೆಯಲಿದೆ.
ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ನಂತರ ತುಲಾ ಮಾಸ ಪೂಜೆಗಾಗಿ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಪ್ರಯತ್ನಿಸಿದರೂ ಪ್ರತಿಭಟನೆಗಳಿಂದಾಗಿ ಇದು ಸಾಧ್ಯವಾಗಲಿಲ್ಲ.
ಪಂಪಾ, ನಿಲಯ್ಕಲ್, ಸನ್ನಿಧಾನದಲ್ಲಿರುವ ಮಾಧ್ಯಮ ಪ್ರತಿನಿಧಿಗಳೂ ಅಲ್ಲಿಂದ ತೆರಳುವಂತೆ ಪೊಲೀಸರು ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.
ಪ್ರತಿಭಟನೆ ಮುಂದುವರಿಸುತ್ತೇವೆ: ಬಿಜೆಪಿ
ಶಬರಿಮಲೆ ದರ್ಶನಕ್ಕೆ ತೆರೆ ಬಿದ್ದರೂ, ಬಿಜೆಪಿ ಮತ್ತು ಇನ್ನಿತರ ಸಂಘಟನೆಗಳು ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿವೆ.23ನೇ ತಾರೀಖಿನಿಂದ 30ರವರೆಗೆ ಪಂಚಾಯತ್ ಮಟ್ಟದಲ್ಲಿ ಉಪವಾಸ ಸತ್ಯಾಗ್ರಹ,ನವೆಂಬರ್ 1 ರಿಂದ 15ರ ವರೆಗೆ ಎಲ್ಲ ಜಿಲ್ಲೆಗಳಲ್ಲಿ ವಾಹನ ಜಾಥಾ, ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.