ನವದೆಹಲಿ: ಪ್ರತಿಸ್ಪರ್ಧಿ ಬಣ ಎಐಎಡಿಎಂಕೆ ಆ ಹೆಸರು ಮತ್ತು ಆ ಪಕ್ಷಕ್ಕೆ ನೀಡಲಾದ ಚಿಹ್ನೆ ಬಳಸದಂತೆ ತಡೆ ಕೋರಿ ಟಿಟಿವಿ ದಿನಕರನ್ ಸಲ್ಲಿಸಿದ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಬಣಕ್ಕೆ ಪಕ್ಷದ ಅಧಿಕೃತ ಹೆಸರು (ಎಐಎಡಿಎಂಕೆ) ಮತ್ತು ಚಿಹ್ನೆ (ಎರಡು ಎಲೆ) ಬಳಸಲು ಚುನಾವಣಾ ಆಯೋಗ 2017ರ ನವೆಂಬರ್ನಲ್ಲಿ ಅನುಮತಿ ನೀಡಿತ್ತು.
ಚುನಾವಣಾ ಆಯೋಗದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಕೂಡ ಇದೇ ಫೆಬ್ರುವರಿ 28ರಂದು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ದಿನಕರನ್, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಇದೇ 14 ಅಥವಾ ಅದಕ್ಕಿಂತ ಮೊದಲು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಮೂವರು ಸದಸ್ಯರ ಪೀಠಕ್ಕೆ ದಿನಕರನ್ ಮನವಿ ಮಾಡಿದರು.
ಇದಕ್ಕೆ ಎಐಎಡಿಎಂಕೆ ಪರ ವಕೀಲರು ಆಕ್ಷೇಪ ಎತ್ತಿದ ಕಾರಣ ಕೋರ್ಟ್ ತ್ವರಿತ ವಿಚಾರಣೆಗೆ ನಿರಾಕರಿಸಿತು. ಈ ಮೊದಲೇ ನಿಗದಿಯಾದಂತೆ ಮಾರ್ಚ್ 15ರಂದು ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.