ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ ‘ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕೇಂದ್ರಿತ’ವಾಗಿದೆ. ಇದು ಬದಲಾಗಬೇಕಾದ ಅಗತ್ಯವಿದೆ ಎಂದು ನ್ಯಾಯಮೂರ್ತಿ ಅಭಯ್ ಎಸ್.ಓಕಾ ಅವರು ಹೇಳಿದರು.
ಓಕಾ ಅವರು ಶನಿವಾರ ತಮ್ಮ ಸ್ಥಾನದಿಂದ ನಿವೃತ್ತಿ ಹೊಂದಲಿದ್ದಾರೆ. ಈ ದಿನ ಕೋರ್ಟ್ ರಜೆ ಇರುವ ಕಾರಣ ಶುಕ್ರವಾರ ಅವರ ವೃತ್ತಿಯ ಕೊನೆಯ ದಿನವಾಗಿತ್ತು.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಓಕಾ ಅವರು, ‘ಸುಪ್ರೀಂ ಕೋರ್ಟ್ ಸಂವಿಧಾನದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು ಎಂಬುದು ಸಂವಿಧಾನ ರಚನಕಾರರ ಕನಸಾಗಿತ್ತು. ಅವರ ಕನಸನ್ನು ಸಾಕಾರಗೊಳಿಸಲು ಪ್ರಮಾಣಿಕವಾಗಿ ಪ್ರಯತ್ನಿಸಿದ್ದೇನೆ’ ಎಂದು ಹೇಳುತ್ತಾ ಭಾವುಕರಾದರು.
ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಂವಿಧಾನದ ಸ್ವಾತಂತ್ರ್ಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
‘ಖ್ಯಾತಿ ಗಳಿಸಲು ನಾವು ನ್ಯಾಯಮೂರ್ತಿಗಳಾಗಿಲ್ಲ ಎನ್ನುವುದು ಸದಾ ನೆನಪಿನಲ್ಲಿ ಇರಬೇಕು ಎಂದು ನ್ಯಾಯಮೂರ್ತಿಯೊಬ್ಬರು ಸಲಹೆ ನೀಡಿದ್ದರು. ಅದನ್ನು ನಾನು ಪಾಲಿಸಿದ್ದೇನೆ’ ಎಂದರು.
ವಿಚಾರಣಾ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಸಾಕಷ್ಟು ಅರ್ಜಿಗಳ ವಿಚಾರಣೆ ಬಾಕಿ ಇದೆ. ವಿಚಾರಣಾ ನ್ಯಾಯಾಲಯಗಳನ್ನು ಅಧೀನ ನ್ಯಾಯಾಲಯಗಳು ಎಂದು ಭಾವಿಸಬಾರದು. ಇದು ಸಂವಿಧಾನಾತ್ಮ ಮೌಲ್ಯಗಳಿಗೆ ವಿರುದ್ಧವಾದುದು ಎಂದು ಹೇಳಿದರು.
ನ್ಯಾಯಮೂರ್ತಿ ಓಕಾ ಅವರ ಕೊಡುಗೆಯು ನ್ಯಾಯಾಂಗದ ತೀರ್ಪುಗಳ ಗುಣಮಟ್ಟನ್ನು ಹೆಚ್ಚಿಸಿದೆ. ನ್ಯಾಯಾಲಯದಲ್ಲಿ ಅವರು ಶಿಕ್ಷಕರಾಗಿದ್ದರುಬಿ.ಆರ್. ಗವಾಯಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
ತಾಯಿಯ ವಿಯೋಗವಾಗಿದ್ದರೂ ಕೆಲಸಕ್ಕೆ ಹಾಜರಿ: 11 ಅರ್ಜಿ ವಿಲೇವಾರಿ
ನಿವೃತ್ತಿಗೂ ಎರಡು ದಿನ ಮೊದಲು ಓಕಾ ಅವರ ತಾಯಿ ನಿಧನರಾಗಿದ್ದರು. ಅಂತ್ಯಸಂಸ್ಕಾರ ಪೂರ್ಣಗೊಳಿಸಿ ರಾತ್ರಿ ಇಡೀ ಪ್ರಯಾಣಿಸಿ ಶುಕ್ರವಾರ ಕೋರ್ಟ್ಗೆ ಹಾಜರಾದ ಓಕಾ ಅವರು 11 ಅರ್ಜಿಗಳನ್ನು ವಿಲೇವಾರಿ ಮಾಡಿದರು. ಓಕಾ ಅವರು 2021ರ ಆಗಸ್ಟ್ 31ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಅವರ ಎರಡು ದಶಕಗಳ ನ್ಯಾಯಾಂಗ ಸೇವೆಯಲ್ಲಿ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮತ್ತು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.