ನವದೆಹಲಿ: 2018ರಲ್ಲಿ ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರು ಮಧ್ಯಂತರ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಿತು.
‘ರಾಜ್ಯ ಸರ್ಕಾರಗಳು ಹೀಗೆ ವ್ಯಕ್ತಿಯೊಬ್ಬನ್ನು ಗುರಿಯಾಗಿಸುವುದಾದರೆ, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಗೆ ಸುಪ್ರೀಂ ಕೋರ್ಟ್ ಇದೆ ಎನ್ನುವುದನ್ನು ಅರಿಯಬೇಕು‘ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ರಜೆ ಕಾಲದ ನ್ಯಾಯಪೀಠ ಹೇಳಿದೆ.
ರಾಜ್ಯ ಸರ್ಕಾರಗಳು ಸಿದ್ಧಾಂತ ಮತ್ತು ಭಿನ್ನಾಭಿಪ್ರಾಯದ ಆಧಾರದ ಮೇಲೆ ಕೆಲವು ವ್ಯಕ್ತಿಗಳನ್ನು ಗುರಿಯಾಗಿಸಿರುವ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಗೋಸ್ವಾಮಿಯವರ ಪ್ರಕರಣ ‘ವೈಯಕ್ತಿಕ ಸ್ವಾತಂತ್ರ್ಯ‘ಕ್ಕೆ ಸಂಬಂಧಿಸಿರುವುದರಿಂದ ಅವರನ್ನು ಕಸ್ಟಡಿ ವಿಚಾರಣೆ ಮಾಡುವ ಅಗತ್ಯವಿದೆಯೇ‘ ಎಂದು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿತು.
‘ಅವರ (ಅರ್ನಬ್) ಸಿದ್ಧಾಂತ ಏನೇ ಇರಲಿ. ನಾನು ಅವರ ವಾಹಿನಿಯನ್ನು ವೀಕ್ಷಿಸುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಸಾಂವಿಧಾನಿಕ ಕೋರ್ಟ್ ಮಧ್ಯೆ ಪ್ರವೇಶಿಸದಿದ್ದರೆ ನಿಸ್ಸಂಶಯವಾಗಿ ನಾವು ವಿನಾಶದ ಹಾದಿಯಲ್ಲಿ ಹೋಗುತ್ತಿದ್ದೇವೆ ಎಂದರ್ಥವಾಗುತ್ತದೆ‘ ಎಂದು ನ್ಯಾಯಮುರ್ತಿ ಚಂದ್ರಚೂಡ್ ಹೇಳಿದರು.
‘ಎ ಎಂಬ ವ್ಯಕ್ತಿಗೆ ಬಿ ಎಂಬ ವ್ಯಕ್ತಿ ಹಣ ನೀಡದಿದ್ದರೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವಾಗುತ್ತದೆಯೇ’ ಎಂದೂ ಕೋರ್ಟ್ ಪ್ರಶ್ನಿಸಿತು.
ಅರ್ನಬ್ ಗೋಸ್ವಾಮಿಯವರ ಪರ ವಾದ ಮಂಡಿಸಿದ ನ್ಯಾಯವಾದಿ ಹರೀಶ್ ಸಾಳ್ವೆ, ‘ಚಾನೆಲ್ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಉಲ್ಲೇಖಿಸಿ ಮಹಾರಾಷ್ಟ್ರ ಸರ್ಕಾರ ನನ್ನ ಕಕ್ಷಿದಾರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುತ್ತಿದೆ‘ ಎಂದು ಆರೋಪಿಸಿದರುಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅವರು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.