ನವದೆಹಲಿ: ಭೂಷಣ್ ಸ್ಟೀಲ್ ಮತ್ತು ಪವರ್ಸ್ಟೀಲ್ ಲಿಮಿಟೆಡ್ (ಬಿಎಸ್ಪಿಎಲ್)ಗಾಗಿ ಜೆಎಸ್ಡಬ್ಲ್ಯೂ ಸ್ಟೀಲ್ ಸಲ್ಲಿಸಿದ್ದ ಪರಿಹಾರ ಯೋಜನೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದು ಕಾನೂನುಬಾಹಿರವಾಗಿದ್ದು, ದಿವಾಳಿತನ ಸಂಹಿತೆಯ (ಐಬಿಸಿ) ಉಲ್ಲಂಘನೆಯಾಗಿದೆ ಎಂದು ಹೇಳಿದೆ.
‘ದಿವಾಳಿತನ ಸಂಹಿತೆ ಅಡಿಯಲ್ಲಿಯೇ ಬಿಎಸ್ಪಿಎಲ್ ಅನ್ನು ಪರಿಸಮಾಪ್ತಿಗೊಳಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಬೆಲಾ ಎಂ. ತ್ರಿವೇದಿ ಹಾಗೂ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಆದೇಶ ನೀಡಿದ್ದಾರೆ.
ಪರಿಹಾರ ಪ್ರಕ್ರಿಯೆಯಲ್ಲಿ ಎಲ್ಲ ಪ್ರಮುಖ ಪಾಲುದಾರರ ನಡವಳಿಕೆಯನ್ನು ಸುಪ್ರೀಂಕೋರ್ಟ್ ಟೀಕಿಸಿದೆ. ಪರಿಹಾರ ಯೋಜನೆಯು ದಿವಾಳಿತನ ಸಂಹಿತೆ ಅಡಿಯಲ್ಲಿ ಸ್ಪಷ್ಟವಾಗಿ ನಿಯಮ ಉಲ್ಲಂಘನೆ ಮಾಡಿದ ಹೊಸ ಸಾಲಗಾರರ ಸಮಿತಿ (ಸಿಒಸಿ) ಹಾಗೂ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್ಸಿಎಲ್ಎಟಿ) ವಿರುದ್ಧವೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
‘ಪರಿಹಾರ ಯೋಜನೆ ಪ್ರಕ್ರಿಯೆಯನ್ನು ಶಾಸನಬದ್ಧವಾಗಿ ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಯಾವುದೇ ಪ್ರಕ್ರಿಯೆಯು, ದಿವಾಳಿತನ ಸಂಹಿತೆ ಹಾಗೂ ಇತರೆ ಸಂಬಂಧಿತ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ’ ಎಂದು ಬೆಲಾ ತ್ರಿವೇದಿ ಅವರು ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.