ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ. ಇದೆ ವೇಳೆ ಈ ಪ್ರಕರಣದ ತನಿಖೆಯನ್ನು ‘ಯಾವಾಗ ಕೊನೆಗೊಳಿಸುತ್ತೀರಿ’ ಎಂದು ನ್ಯಾಯಾಲಯವು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಪ್ರಶ್ನಿಸಿದೆ.
‘ಈ ಪ್ರಕರಣದಲ್ಲಿ 493 ಸಾಕ್ಷಿಗಳಿವೆ. ಇದರಲ್ಲಿ ನೀವು ಶೇ 50ರಷ್ಟು ಸಾಕ್ಷಿಗಳನ್ನು ಕೈಬಿಟ್ಟರೂ ಇನ್ನೂ ಸುಮಾರು 250 ಸಾಕ್ಷಿಗಳು ಉಳಿಯಲಿವೆ. ಇಷ್ಟೆಲ್ಲಾ ಸಾಕ್ಷಿಗಳ ವಿಚಾರಣೆ ನಡೆಸುವುದು ವಾಸ್ತವದಲ್ಲಿ ಸಾಧ್ಯವಿದೆಯೇ? ನೀವು ಇದನ್ನೆಲ್ಲಾ ಯಾವಾಗ ಅಂತ್ಯಗೊಳಿಸುತ್ತೀರಿ ಎಂದು ನಿಮಗೆ ಅನ್ನಿಸುತ್ತದೆ ಎಂದು ಹೇಳಿ’ ಎಂದು ನ್ಯಾಯಮೂರ್ತಿಗಾಳದ ಬಿ.ಆರ್. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್ ಅವರು ಹೆಚ್ಚುವರಿಗೆ ಸಾಲಿಸಿಟರ್ ಜನರಲ್ ಸಿ.ವಿ.ರಾಜು ಅವರನ್ನು ಪ್ರಶ್ನಿಸಿದರು.
‘ಸಿಬಿಐ ಹಾಗೂ ಇ.ಡಿ. ದಾಖಲಿಸಿರುವ ಪ್ರಕರಣಗಳಲ್ಲಿ ಕ್ರಮವಾಗಿ ಎಂಟು ಪ್ರಮುಖ ಸಾಕ್ಷಿಗಳಿವೆ’ ಎಂದು ರಾಜು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಯಾವಾಗ ವಿಚಾರಣೆ ಆರಂಭಿಸುತ್ತೀರಿ’ ಎಂದು ಪ್ರಶ್ನಿಸಿತು. ‘ಒಂದು ತಿಂಗಳಲ್ಲಿ ಆರೋಪಪಟ್ಟಿ ಸಲ್ಲಿಸಲಿದ್ದೇವೆ. ಆ ಬಳಿಕ ಸಾಕ್ಷಿಗಳ ವಿಚಾರಣೆ ನಡೆಸಲಿದ್ದೇವೆ’ ಎಂದು ರಾಜು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.