ನವದೆಹಲಿ:‘ಪತ್ನಿ ಮೇಲೆ ಅತ್ಯಾಚಾರ ನಡೆಸಿದ್ದಕ್ಕಾಗಿ ಪತಿಯನ್ನು ವಿಚಾರಣೆಗೆ ಒಳಪಡಿಸಬಹುದು ಹಾಗೂಐಪಿಸಿ ಸೆಕ್ಷನ್ 375ರ ಅಡಿ ಪತಿಗೆ ನೀಡಿರುವ ವಿನಾಯಿತಿ ಪ್ರಶ್ನಾರ್ಹವಲ್ಲ’ ಎಂಬ ಕರ್ನಾಟಕ ಹೈಕೋರ್ಟ್ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು, ಕರ್ನಾಟಕ ಹೈಕೋರ್ಟ್ ಇದೇ ವರ್ಷದ ಮಾರ್ಚ್ 23ರಂದು ನೀಡಿದ ಅಂತಿಮ ತೀರ್ಪು ಅಪ್ರಸ್ತುತ. ಈ ಪ್ರಕರಣ ಸಂಬಂಧ ಮತ್ತೊಂದು ಆದೇಶ ನೀಡುವವರೆಗೂ, ಹೈಕೋರ್ಟ್ ತೀರ್ಪು ಜಾರಿಯಾಗದಂತೆ ಮಧ್ಯಂತರ ತಡೆ ನೀಡಿದೆ.
ಈ ಸಂಬಂಧ ಪತಿ ಸಲ್ಲಿಸಿದ ಅರ್ಜಿಯನ್ನು ಈಚೆಗೆ ಮಾನ್ಯ ಮಾಡಿರುವ ಕೋರ್ಟ್, ಆತನ ವಿರುದ್ಧ ಬೆಂಗಳೂರಿನ ನ್ಯಾಯಾಲಯವೊಂದರಲ್ಲಿ ಆರಂಭವಾಗಿರುವ ಕ್ರಿಮಿನಲ್ ವಿಚಾರಣೆಯನ್ನು ಅಮಾನತುಗೊಳಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ನೀಡಿದ ತೀರ್ಪಿನಲ್ಲಿ, ಅತ್ಯಾಚಾರದ ಅಪರಾಧದ ವಿರುದ್ಧ ಕಾನೂನಿನಡಿ ಪತಿಗೆ ನೀಡಿರುವ ವಿನಾಯಿತಿಯಿಂದಾಗಿ ಅಸಮಾನತೆ ಉಂಟಾಗುತ್ತದೆ ಮತ್ತು ಇದು ಸಂವಿಧಾನದ 14ನೇ (ಸಮಾನತೆ) ವಿಧಿಗೂ ವಿರುದ್ಧವಾದುದು ಎಂದು ಹೇಳಿತ್ತು. ಮಹಿಳೆಯೊಬ್ಬಳ ಮೇಲೆ ನಡೆಯುವ ಅಮಾನುಷ ಲೈಂಗಿಕ ದೌರ್ಜನ್ಯ, ಅದು ಆಕೆಯ ಗಂಡನಿಂದಲೇ ನಡೆದಿದ್ದರೂ, ಅದನ್ನು ಅತ್ಯಾಚಾರ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.