ADVERTISEMENT

ಮುಸ್ಲಿಮರಿಗೆ ಶರಿಯಾ ಬದಲು ಉತ್ತರಾಧಿಕಾರ ಕಾಯ್ದೆ ಅನ್ವಯ: ಪರಿಶೀಲನೆಗೆ SC ಒಪ್ಪಿಗೆ

ಪಿಟಿಐ
Published 17 ಏಪ್ರಿಲ್ 2025, 15:51 IST
Last Updated 17 ಏಪ್ರಿಲ್ 2025, 15:51 IST
–
   

ನವದೆಹಲಿ: ಪೂರ್ವಜರ ಆಸ್ತಿಗಳ ಕುರಿತ ವ್ಯಾಜ್ಯಗಳಿಗೆ ಸಂಬಂಧಿಸಿ ಮುಸ್ಲಿಮರಿಗೆ ಶರಿಯಾ ಬದಲು, ಧಾರ್ಮಿಕ ನಂಬಿಕೆಗಳನ್ನು ನಿರಾಕರಿಸದೇ ಅವರಿಗೂ ಜಾತ್ಯತೀತವಾದ ಉತ್ತರಾಧಿಕಾರ ಕಾಯ್ದೆ ಅನ್ವಯಿಸಬೇಕೆ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಗುರುವಾರ ಒಪ್ಪಿದೆ.

ಕೇರಳದ ತ್ರಿಶ್ಶೂರಿನ ನೌಶಾದ್‌ ಕೆ.ಕೆ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಸಂಜೀವ್‌ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ ಕುಮಾರ್‌ ಅವರು ಇದ್ದ ಪೀಠ ಈ ಮಾತು ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಹಾಗೂ ಕೇರಳ ಸರ್ಕಾರಕ್ಕೆ ಪೀಠ ನೋಟಿಸ್‌ ಜಾರಿ ಮಾಡಿತು. ಅಲ್ಲದೇ, ಇದೇ ವಿಚಾರಕ್ಕೆ ಸಂಬಂಧಿಸಿ ವಿಚಾರಣೆಗೆ ಬಾಕಿ ಇರುವ ಅರ್ಜಿಗಳೊಂದಿಗೆ ಈ ಮೇಲ್ಮನವಿಯನ್ನು ಸೇರಿಸುವಂತೆಯೂ ಪೀಠ ಆದೇಶಿಸಿದೆ.

ADVERTISEMENT

‘ನಾನು ಇಸ್ಲಾಂ ತ್ಯಜಿಸಿದ್ದೇನೆ. ಈ ಕಾರಣಕ್ಕೆ ನನಗೆ ಶರಿಯಾ ಬದಲು ಉತ್ತರಾಧಿಕಾರ ಕಾಯ್ದೆ ಅನ್ವಯಿಸಬೇಕು’ ಎಂದು ನೌಶಾದ್‌ ಕೋರಿದ್ದಾರೆ.

ಅಲಪ್ಪುಳ ನಿವಾಸಿ ಹಾಗೂ ‘ಎಕ್ಸ್‌ ಮುಸ್ಲಿಮ್ಸ್‌ ಆಫ್‌ ಕೇರಳ’ ಸಂಘಟನೆ ಪ್ರಧಾನ ಕಾರ್ಯದರ್ಶಿ ಸಫಿಯ ಪಿ.ಎಂ ಅವರು ಇಂಥದೇ ಬೇಡಿಕೆವುಳ್ಳ ಅರ್ಜಿಯನ್ನು ಸಲ್ಲಿಸಿದ್ದಾರೆ. ‘ಕುರಾನ್‌ ಸುನ್ನತ್‌ ಸೊಸೈಟಿ’ ಕೂಡ ಇದೇ ಬೇಡಿಕೆ ಮುಂದಿಟ್ಟುಕೊಂಡು 2016ರಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಮೂರು ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.