ನವದೆಹಲಿ: ದೆಹಲಿಯ ದಕ್ಷಿಣ ಭಾಗದಲ್ಲಿನ ಆಭರಣ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಕದ್ದಿದ್ದ 41 ವರ್ಷದ ಭದ್ರತಾ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈತ ಕೇವಲ 11 ನಿಮಿಷಗಳಲ್ಲಿ ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ಕದ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್ನಗರ ಮೂಲದ ರವೀಂದರ್ ಎಂಬಾತನೇ ಆರೋಪಿ. ಈತ ಅಂಗಡಿಯ ನಕಲಿ ಕೀಲಿಗಳನ್ನು ಬಳಸಿ ಈ ಕೃತ್ಯ ಎಸಗಿದ್ದಾನೆ ದಕ್ಷಿಣ ದೆಹಲಿಯ ಡಿಸಿಪಿ ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ಆಭರಣಗಳು ಕಳುವಾಗಿರುವ ಕುರಿತು ಮಹಿಳಾ ಉದ್ಯೋಗಿಯೊಬ್ಬರು ವರದಿ ಮಾಡಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಇದೇ ವೇಳೆ ಭದ್ರತಾ ಸಿಬ್ಬಂದಿ ದೀರ್ಘ ರಜೆ ಮೇಲೆ ತೆರಳಿರುವುದು ಹಾಗೂ ಆತನ ಫೋನ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ.
ಕೂಡಲೇ ಪೊಲೀಸರು ಭದ್ರತಾ ಸಿಬ್ಬಂದಿಯ ಕರೆ ವಿವರಗಳನ್ನು ಪಡೆದು, ಆತನ ಗ್ರಾಮಕ್ಕೆ ಹೋಗಿ ಬಂಧಿಸಿದ್ದಾರೆ. ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ. ಆತನಿಂದ ಕಳವಾಗಿದ್ದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯಕ್ಕೆ ಆತನಿಗೆ ನೆರವಾಗಿದ್ದ ಆತನ ಸಹಚರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.