ADVERTISEMENT

ಸೋನಿಯಾಗೆ ಪತ್ರ ಬರೆದ ಕಾಂಗ್ರೆಸ್ ಮುಖಂಡರ ವಿರುದ್ಧ ‘ಸೇನಾ’ ವಾಗ್ದಾಳಿ

ರಾಹುಲ್ ನಾಯಕತ್ವವನ್ನು ಮುಗಿಸುವ ಸಂಚು; ಸೇನಾ ಆರೋಪ

ಪಿಟಿಐ
Published 27 ಆಗಸ್ಟ್ 2020, 12:41 IST
Last Updated 27 ಆಗಸ್ಟ್ 2020, 12:41 IST
ಶಿವಸೇನಾ ಲೋಗೊ
ಶಿವಸೇನಾ ಲೋಗೊ   

ಮುಂಬೈ:ಕಾಂಗ್ರೆಸ್ ಪಕ್ಷದ ಪೂರ್ಣಾವಧಿ ಅಧ್ಯಕ್ಷೆಯಾಗಿ ಮುಂದುವರಿಯಬೇಕೆಂದು ಸೋನಿಯಾಗಾಂಧಿ ಅವರಿಗೆ ಪಕ್ಷದ 23 ಹಿರಿಯ ನಾಯಕರು ಬರೆದ ಪತ್ರವು 'ರಾಹುಲ್ ಗಾಂಧಿ ನಾಯಕತ್ವವನ್ನು ಮುಗಿಸುವ ಸಂಚು' ಎಂದು ಶಿವಸೇನೆ ಪ್ರತಿಪಾದಿಸಿದೆ.

‘ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ನೀಚಮಟ್ಟದಲ್ಲಿ ವಾಗ್ದಾಳಿ ನಡೆಸುತ್ತಿದ್ದಾಗ ಈ ಮುಖಂಡರೆಲ್ಲಾ ಎಲ್ಲಿದ್ದರು? ಅವರು ಕಾಂ‌ಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹೊರಬಂದ ನಂತರ ಈ ನಾಯಕರು ಪಕ್ಷವನ್ನು ಪುನರುಜ್ಜೀವನಗೊಳಿಸುವ ಸವಾಲನ್ನು ಏಕೆ ಸ್ವೀಕರಿಸಲಿಲ್ಲ?’ ಎಂದು ಶಿವಸೇನಾ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಪ್ರಶ್ನಿಸಿದೆ.

‘ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಮುಗಿಸುವ ರಾಷ್ಟ್ರೀಯ ಪಿತೂರಿಯಲ್ಲಿ ಈ ನಾಯಕರು ಇರುವಾಗ, ಕಾಂಗ್ರೆಸ್ ನಿಶ್ಚಿತವಾಗಿ ಸೋಲುವುದು ಖಚಿತ. ಪಕ್ಷದೊಳಗಿನ ಈ ನಾಯಕರೇ ರಾಹುಲ್ ಗಾಂಧಿ ಅವರನ್ನು ಆಂತರಿಕವಾಗಿ ಧ್ವಂಸಗೊಳಿಸಲಿದ್ದಾರೆಯೇ ಹೊರತು ಬಿಜೆಪಿಯ ದಾಳಿಯಲ್ಲ’ ಎಂದೂ ಸೇನಾ ವಿಶ್ಲೇಷಿಸಿದೆ.

ADVERTISEMENT

‘ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್‌ನ ದೊಡ್ಡದೊಡ್ಡ ನಾಯಕರು ತಮ್ಮ ಪದವಿ, ಅಧಿಕಾರಗಳ ಬಗ್ಗೆ ಆಸಕ್ತರಾಗಿದ್ದಾರೆಯೋ ಹೊರತು ಪಕ್ಷದ ಹಿತದ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ. ಅವರಿಗೆ ಅಲ್ಲಿ ದಾರಿ ಸಿಗದಿದ್ದರೆ, ಅವರೆಲ್ಲಾ ಬಿಜೆಪಿಗೆ ಸೇರ್ಪಡೆಯಾಗುತ್ತಾರಷ್ಟೇ. ಇದೊಂದೇ ಅವರು ತೋರುವ ಕ್ರಿಯಾಶೀಲತೆ' ಎಂದು ಟೀಕಿಸಿದೆ.

‘ಪತ್ರ ಬರೆದಿರುವವರ ಪೈಕಿ ಕೆಲ ಮುಖಂಡರು ಕನಿಷ್ಠ ಜಿಲ್ಲಾಮಟ್ಟದ ನಾಯಕರೂ ಆಗಿಲ್ಲ. ಆದರೆ, ಗಾಂಧಿ–ನೆಹರೂ ಕುಟುಂಬದ ನಾಯಕತ್ವದಲ್ಲಿ ಈ ಮುಖಂಡರು ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿಬಿಟ್ಟಿದ್ದಾರೆ. ಇಂಥವರ ಬಗ್ಗೆ ರಾಹುಲ್ ಅಥವಾ ಸೋನಿಯಾ ಗಾಂಧಿಯಾಗಲಿ ಏನು ಮಾಡಬಹುದು. ಇದು ರಾಜಕೀಯದ ಹೊಸ ವೈರಸ್!’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.