ಇಂದೋರ್: ‘ರಾಹುಲ್ ಗಾಂಧಿ ಸಭ್ಯತೆ ಮತ್ತು ಭಾಷೆಯ ಮೇಲೆ ಹಿಡಿತವನ್ನು ಕಲಿಯಬೇಕಾಗಿದೆ. ಸೋನಿಯಾ ಗಾಂಧಿ ಅವರೇ ನಿಮ್ಮ ಮಗ ರಾಹುಲ್ ಗಾಂಧಿಯನ್ನು ‘ರಾಜಕೀಯ ಶಾಲೆ’ಗೆ ಸೇರಿಸಿ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
ಯುವಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋಲಿನಿಂದ ಬಡಿಯಲಿದ್ದಾರೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ನಖ್ವಿ, ‘ಕಾಂಗ್ರೆಸ್ ನಾಯಕರು ಯಾವಾಗಲೂ ತಮ್ಮೊಂದಿಗೆ ಕೊಡಲಿಯನ್ನು ಒಯ್ಯುತ್ತಾರೆ. ಕೊಡಲಿಯಿಂದ ತಮ್ಮ ಕಾಲಿಗೆ ತಾವೇ ಹೊಡೆಯುತ್ತಾರೆ. ನಾನು ಸೋನಿಯಾ ಗಾಂಧಿ ಅವರಿಗೆ ಒಂದು ಸಲಹೆ ನೀಡಲು ಇಚ್ಛಿಸುತ್ತೇನೆ. ನಿಮ್ಮ ಮಗ ‘ಪಪ್ಪೂಜಿ’ಯನ್ನು ರಾಜಕೀಯ ಶಾಲೆಗೆ ಸೇರಿಸಿ. ಅಲ್ಲಿ ಅವರು ರಾಜಕೀಯದ ಎಬಿಸಿಡಿ, ಸಭ್ಯತೆ ಕಲಿಯಲಿ’ ಎಂದರು.
‘ನೊ ಎಕ್ಸಿಟ್’ ಫಲಕ ಹಾಕಿಲ್ಲ: ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ) ವಿರೋಧಿಸಿ ಮಧ್ಯಪ್ರದೇಶದ ಮುಸ್ಲಿಂ ನಾಯಕರು ಬಿಜೆಪಿಗೆ ರಾಜೀನಾಮೆ ಕೊಡುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ನಖ್ವಿ, ‘ನಮ್ಮ ಪಕ್ಷವು ‘ನೊ ಎಕ್ಸಿಟ್’ ಅಥವಾ ‘ನೊ ಎಂಟ್ರಿ’ ಫಲಕಗಳನ್ನು ಹಾಕಿಲ್ಲ. ಸಿಎಎಯಿಂದ ಭಾರತದ ಪ್ರಜೆಗಳಿಗೆ ಯಾವುದೇ ತೊಂದರೆ ಇಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.