ಲಖನೌ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಪಟ್ನಾ ಸಾಹಿಬ್ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ನಿರ್ಧಾರಗಳನ್ನು ಗಣನೆಗೆ ತೆಗೆದುಕೊಳ್ಳದ ಅವರು, ಈ ಬಾರಿ ಕ್ಷೇತ್ರ ಬದಲಿಸುವುದಿಲ್ಲ ಎಂದೂ ಹೇಳಿದ್ದಾರೆ.
’ಸಿಚುವೇಷನ್ ಕುಛ್ ಭಿ ಹೋ, ಲೊಕೇಶನ್ ವಹೀ ಹೋಗಿ‘ (ಪರಿಸ್ಥಿತಿ ಏನೇ ಇರಲಿ, ಸ್ಥಳ ಅದೇ ಆಗಿರುತ್ತದೆ) ಎಂದಿದ್ದಾರೆ.
2015ರ ಬಿಹಾರ ಚುನಾವಣೆಯ ನಂತರ ಶತ್ರುಘ್ನ ಅವರು ವಿವಿಧ ವಿಷಯಗಳಲ್ಲಿ ಬಿಜೆಪಿ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ.
ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಜಾರಿಗೊಳಿಸಿದ್ದನ್ನು ಅವರು ಟೀಕೆ ಮಾಡಿದ್ದರು. ಈಚೆಗೆ ಕೋಲ್ಕತ್ತದಲ್ಲಿ ನಡೆದ ಬಿಜೆಪಿ ವಿರೋಧಿ ರ್ಯಾಲಿಯಲ್ಲಿ ಪಾಲ್ಗೊಂಡು ವಿರೋಧ ಪಕ್ಷಗಳ ಮುಖಂಡರ ಜೊತೆ ಶತ್ರುಘ್ನ ವೇದಿಕೆ ಹಂಚಿಕೊಂಡಿದ್ದರು.
ಲಖನೌಗೆ ಈಚೆಗೆ ಭೇಟಿ ನೀಡಿದ್ದ ವೇಳೆ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಜೊತೆ ಮಾತುಕತೆ ಕೂಡ ನಡೆಸಿದ್ದರು.
ಶತ್ರುಘ್ನ ಅವರ ಪತ್ನಿ ಪೂನಂ ಸಿನ್ಹಾ ಅವರು ಗೃಹಸಚಿವ ರಾಜನಾಥ್ ಸಿಂಗ್ ಪ್ರತಿನಿಧಿಸುವ ಲಖನೌ ಕ್ಷೇತ್ರದಿಂದ ಸಕ್ರಿಯ ರಾಜಕರಣಕ್ಕೆ ಪ್ರವೇಶಿಸುವ ಕುರಿತೂ ಈ ವೇಳೆ ಚರ್ಚೆ ನಡೆದಿತ್ತು ಎಂಬ ಊಹಾಪೋಹಗಳು ಕೇಳಿ ಬಂದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.