ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಸಿಪಿಎಂ ಶಾಸಕ ಮೊಹಮ್ಮದ್ ಯೂಸುಫ್ ತಾರಿಗಾಮಿ ಅವರನ್ನು ಶ್ರೀನಗರದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ತಕ್ಷಣ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ಸದ್ಯ ಗೃಹ ಬಂಧನದಲ್ಲಿರುವ ತಾರಿಗಾಮಿ ಅವರನ್ನು ಶ್ರೀನಗರದ ಶೇರ್ ಇ ಕಾಶ್ಮೀರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಏಮ್ಸ್ ವೈದ್ಯರ ಸಮಾಲೋಚನೆ ಬಳಿಕ ದೆಹಲಿಗೆ ವರ್ಗಾಯಿಸುವಂತೆ ಸೂಚಿಸಿದೆ.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸಲ್ಲಿಸಿದ್ದ ಅರ್ಜಿ ಅಧರಿಸಿ, ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.ತಾರಿಗಾಮಿ ವಿರುದ್ಧ ಯಾವುದೇ ಆರೋಪಗಳಿಲ್ಲದಿದ್ದರೂ ಅವರನ್ನು ಬಂಧಿಸಿಡಲಾಗಿದೆ ಎಂದು ಯೆಚೂರಿ ಆರೋಪಿಸಿದ್ದರು.
ಮೆಹಬೂಬಾ ಭೇಟಿಗೆ ಅವಕಾಶ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯ ಭೇಟಿಗೆ ಅವರ ಪುತ್ರಿ ಇಲ್ತಿಜಾ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ರಾಜ್ಯದಲ್ಲಿ ನಿರ್ಬಂಧ ಹೇರಿದ ಕಾರಣ ಇಲ್ತಿಜಾ ಅವರು ಚೆನ್ನೈಗೆ ಸ್ಥಳಾಂತರಗೊಂಡಿದ್ದರು. ಅವರು ಯಾವಾಗ ಬೇಕಾದರೂ ತಮ್ಮ ತಾಯಿಯನ್ನು ಭೇಟಿಯಾಗಬಹುದು ಎಂದು ಕೋರ್ಟ್ ತಿಳಿಸಿತು.
ಕಾಶ್ಮೀರದಲ್ಲಿ ಸಂವಹನ ಮಾಧ್ಯಮಗಳ ಮೇಲೆ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಕಾಶ್ಮೀರ ಟೈಮ್ಸ್ ಸಂಪಾದಕರು ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇದೇ 16ಕ್ಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.