ADVERTISEMENT

ಶೋಪಿಯಾನ್ ಎನ್‌ಕೌಂಟರ್‌ ಪ್ರಕರಣ: ಶೀಘ್ರ ‘ಸಾಕ್ಷ್ಯಗಳ ಸಾರಾಂಶ’ ಸಿದ್ಧ

ಪಿಟಿಐ
Published 10 ಅಕ್ಟೋಬರ್ 2020, 14:11 IST
Last Updated 10 ಅಕ್ಟೋಬರ್ 2020, 14:11 IST

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಂಶಿಪುರದಲ್ಲಿ ಜುಲೈ 18ರಂದು ನಡೆದಿದ್ದ ‘ಎನ್‌ಕೌಂಟರ್’ ಕುರಿತು ಕೋರ್ಟ್‌ ಮಾರ್ಷಲ್‌ಗೆ ಮುನ್ನ ಸಾಕ್ಷ್ಯಗಳ ಸಾರಾಂಶವನ್ನು ಸಿದ್ಧಪಡಿಸುವ ಪ್ರಕ್ರಿಯೆ ಶೀಘ್ರವೇ ಮುಗಿಯಲಿದೆ ಎಂಬ ಭಾರತೀಯ ಸೇನೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮೂವರು ಉಗ್ರರು ಹತರಾಗಿದ್ದಾರೆ ಎಂದು ಸೇನೆ ಹೇಳಿಕೊಂಡಿತ್ತು. ‘ಈಪ್ರಕರಣದಲ್ಲಿ ಕೆಲವು ಲೋಪಗಳಾಗಿವೆ. ಈ ಕುರಿತು ಸಾಕ್ಷ್ಯಗಳ ಸಾರಾಂಶವನ್ನು ಕ್ರೋಡೀಕರಿಸುವ ಕಾರ್ಯವನ್ನು ಸೇನೆ ಆರಂಭಿಸಿದೆ’ ಎಂದು ಶ್ರೀನಗರದಲ್ಲಿನ ಸೇನಾ ತುಕಡಿಯ ಲೆಫ್ಟಿನಂಟ್ ಜನರಲ್ ಬಿ.ಎಸ್.ರಾಜು ಅವರು ತಿಳಿಸಿದ್ದಾರೆ.

‘ಲೋಪವಾಗಿರುವುದು ಗಮನಕ್ಕೆ ಬಂದ ಕಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವಿವರಗಳನ್ನು ಕೆಳಹಂತದ ವಿಚಾರಣೆ ವೇಳೆ ತಿಳಿಸಲಾಗಿತ್ತು. ಇದರ ಆಧಾರದಲ್ಲಿ ಸಾಕ್ಷ್ಯಗಳ ಸಾರಾಂಶವನ್ನು ಸಲ್ಲಿಸಲು ಸೂಚಿಸಲಾಗಿತ್ತು. ಶೀಘ್ರವೇ ಈ ಕಾರ್ಯವೂ ಪೂರ್ಣವಾಗಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಜಮ್ಮು ಕಾಶ್ಮೀರದ ಲೈಟ್ ಇನ್‌ಫಂಟ್ರಿ ರೆಜಿಮೆಂಟಲ್‌ ಸೆಂಟರ್‌ನಲ್ಲಿ ನಡೆದ ನಿರ್ಗಮನ ಪಥಸಂಚಲನ ಸಂದರ್ಭದಲ್ಲಿ ಅವರು ಈ ಕುರಿತು ಮಾತನಾಡಿದರು.

ಅಂಶಿಪುರದಿಂದ ಮೂವರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾದ ಬಳಿಕ ಸೇನೆ ಈ ಕುರಿತು ವಿಚಾರಣೆ ಕೈಗೊಂಡಿತ್ತು. ನಾಪತ್ತೆ ಬಗ್ಗೆ ಕುಟುಂಬದ ಸದಸ್ಯರೂ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರೂ ವಿಚಾರಣೆ ನಡೆಸಿದ್ದು, ಕಾಶ್ಮೀರದ ಐಜಿಪಿ ವಿಜಯಕುಮಾರ್ ಅವರು ಸೆಪ್ಟೆಂಬರ್‌ 30ರಂದು, ‘ಕುಟುಂಬದ ಸದಸ್ಯರು ಮತ್ತು ಮೃತರ ಡಿಎನ್‌ಎ ಹೋಲಿಕೆ ಆಗಲಿದೆ’ ಎಂದು ತಿಳಿಸಿದ್ದರು. ಈ ಬೆಳವಣಿಗೆ ಹಿಂದೆಯೇ ಅ.3ರಂದು ಹೂಳಿದ್ದ ಶವಗಳನ್ನು ಹೊರತೆಗೆಯಲಾಗಿದ್ದು, ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.