ಸಂದೇಶ್ಖಾಲಿ (ಪಶ್ಚಿಮ ಬಂಗಾಳ): ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ಖಾಲಿಯ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ ಮತ್ತು ಅರಾಜಕತೆಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಮಂಗಳವಾರ ಹೇಳಿದ್ದಾರೆ.
ಕಲ್ಕತ್ತಾ ಹೈಕೋರ್ಟ್ನಿಂದ ಅನುಮತಿ ಪಡೆದ ನಂತರ ಮಂಗಳವಾರ ಮಧ್ಯಾಹ್ನ ಸಂದೇಶ್ಖಾಲಿಗೆ ಬಿಜೆಪಿ ಶಾಸಕ ಶಂಕರ್ ಘೋಷ್ ಅವರಿಗೊಂದಿಗೆ ಭೇಟಿ ನೀಡಿ, ಮಹಿಳೆಯರು ಸೇರಿದಂತೆ ಸ್ದಳೀಯರೊಂದಿಗೆ ಮಾತನಾಡಿದರು.
ತಲೆಮರೆಸಿಕೊಂಡಿರುವ ಶಹಜಹಾನ್ ಶೇಖ್ ಸೇರಿದಂತೆ ಸ್ಥಳೀಯ ಟಿಎಂಸಿ ನಾಯಕರಿಂದ ತಮಗೆ ಆಗಿರುವ ಅನುಭವವನ್ಳು ನಯರು ಬಿಜೆಪಿ ನಾಯಕರೊಂದಿಗೆ ಹಂಚಿಕೊಂಡರು.
‘ಸ್ಥಳೀಯರ ಅನುಭವಗಳು ಭಯಾನಕವಾಗಿವೆ. ಅವರ ಭೂಮಿ ಕಬಳಿಸಲಾಗಿದೆ. ಮಹಿಳೆಯರ ಶೋಷಣೆ ಮಾಡಲಾಗಿದೆ. ಎಲ್ಲವೂ ಪೊಲೀಸ್ ಮತ್ತು ಆಡಳಿತದ ನೆರವಿನಿಂದಲೇ ನಡೆದಿದೆ. ಇಲ್ಲಿ ಅರಾಜಕತೆ ಉಂಟಾಗಿದೆ ಎಂಬುದಕ್ಕೆ ಈ ಪ್ರದೇಶ ಸ್ಪಷ್ಟ ನಿದರ್ಶನವಾಗಿದೆ’ ಎಂದು ಸುವೆಂದು ಹೇಳಿದರು.
ಸುವೆಂದು ಅಧಿಕಾರಿ ಮತ್ತು ಶಾಸಕ ಶಂಕರ್ ಘೋಷ್ ಸಂದೇಶ್ಖಾಲಿಗೆ ಭೇಟಿ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ, ‘ಇದು ವಾತಾವರಣ ಹಾಳು ಮಾಡುವ ಪ್ರಯತ್ನ’ ಎಂದು ಹೇಳಿದೆ.
‘ಈ ಪ್ರದೇಶದಿಂದ ಕೆಲವು ದೂರುಗಳು ಬಂದಿರುವುದು ನಿಜ. ಸರ್ಕಾರವು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿವೆ. ಆದರೆ ಬಿಜೆಪಿ ಸಮಸ್ಯೆಗೆ ಕೋಮು ಬಣ್ಣ ಹಚ್ಚಿ ವಾತಾವರಣ ಕೆಡಿಸಲು ಪ್ರಯತ್ನಿಸುತ್ತಿದೆ’ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.