ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಈಗಾಗಲೇ ಮತದಾರರನ್ನು ಸೆಳೆಯುವ ಕಸರತ್ತನ್ನು ಆರಂಭಿಸಿವೆ. 'ರಾತ್ರಿ ವೇಳೆ ಹೆದ್ದಾರಿಯಲ್ಲಿ ಪಕ್ಷದ ಬಾವುಟ ನೋಡಿ, ತಕ್ಷಣ ನಿಲ್ಲಿಸಿ ಡ್ರಾಪ್ ನೀಡಿದರು' ಎನ್ನುವುದರ ಮೂಲಕ ಸಮಾಜವಾದಿ ಪಕ್ಷವನ್ನು ರಾಜ್ಯದ ಜನ ಬಯಸುತ್ತಿರುವುದಾಗಿ ಪಕ್ಷದ ರಾಷ್ಟ್ರೀಯ ವಕ್ತಾರ ಡಾ. ಅನುರಾಗ್ ಭದೌರಿಯಾ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಂಡಿರುವ ಭದೌರಿಯಾ, ಅಖಿಲೇಶ್ ಯಾದವ್ ಅವರು ಪುನಃ ಅಧಿಕಾರಕ್ಕೆ ಬರುವ ಭರವಸೆಯಿದು ಎಂದು ಬರೆದುಕೊಂಡಿದ್ದಾರೆ.
'ನಿನ್ನೆ ರಾತ್ರಿ ನಮ್ಮ ಗಾಡಿ ಹೆದ್ದಾರಿ ರಸ್ತೆ ಮಧ್ಯದಲ್ಲೇ ಕೆಟ್ಟು ಹೋಯಿತು. ಯಾರೂ ಕೂಡ ಲಿಫ್ಟ್ ಕೊಡಲಿಲ್ಲ. ಕೊನೆಗೆ ಸಮಾಜವಾದಿ ಪಕ್ಷದ ಲಾಲ್ ಟೋಪಿ ಮತ್ತು ಬಾವುಟವನ್ನು ಹಿಡಿದು ನಿಂತಾಗ ತಕ್ಷಣ ಲಿಫ್ಟ್ ಸಿಕ್ಕಿತು. ಸಮಾಜವಾದಿ ಪಕ್ಷದ ಮೇಲಿರುವ ಪ್ರೀತಿ ಅಭಿಮಾನವಿದು. ಪಕ್ಷದ ಬಾವುಟವನ್ನು ನೋಡಿ ಹೆದ್ದಾರಿ ಮಧ್ಯೆದಲ್ಲೇ ನಿಲ್ಲಿಸಿ ಲಿಫ್ಟ್ ನೀಡಿದ್ದು ವಿಶೇಷ. ಅಖಿಲೇಶ್ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂಬುದರ ಭರವಸೆ' ಎಂದು ಭದೌರಿಯಾ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ರಾತ್ರಿ ವೇಳೆ ಹೆದ್ದಾರಿಯಲ್ಲಿ ಸಮಾಜವಾದಿ ಪಕ್ಷದ ಟೋಪಿ ಧರಿಸಿ, ಬಾವುಟ ಹಿಡಿದು ಲಿಫ್ಟ್ಗಾಗಿ ಕೇಳುವ ದೃಶ್ಯವಿದೆ. ರಸ್ತೆ ಮಧ್ಯೆ ಬಂದ ವ್ಯಕ್ತಿಯನ್ನು ನೋಡಿ ಟೊಯೊಟಾ ಇನೊವಾ ಕ್ರಿಸ್ಟಾ ಕಾರು ನಿಲ್ಲಿಸುವುದು ಹಾಗೂ ಅವರನ್ನು ಎಲ್ಲಿಗೆ ಹೋಗಬೇಕು ಎಂದು ಕೇಳಿ ಹತ್ತಿಸಿಕೊಳ್ಳುವ ದೃಶ್ಯವಿದೆ.
ಇದೊಂದು ಪೂರ್ವ ಯೋಜಿತ ಘಟನೆ. ರಾಜಕೀಯ ಗಿಮಿಕ್ ಎಂದು ಹಲವರು ಟೀಕಿಸಿದ್ದಾರೆ.
ಶುಭ್ರಾಸ್ತ್ರ ಎಂಬುವವರು, ಅರೇ ಅನುರಾಗ್ ಜೀ ಅವರೇ, ಛಾಯಾಗ್ರಾಹಕರಿಗೆ ಏನಾಯಿತು? ಹೆದ್ದಾರಿಯಲ್ಲಿ ಅವರನ್ನು ಅಲ್ಲೇ ಬಿಟ್ಟು ನೀವು ಹೋಗಿದ್ದಾ? ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.