ಲಾಹೋರ್: ‘ಭಾರತದ ಗೂಢಚಾರ’ ರಾಜು ಲಕ್ಷ್ಮಣ್ (30) ಎಂಬವರನ್ನು ಪಂಜಾಬ್ ಪ್ರಾಂತ್ಯದ ದೇರಾ ಘಾಜಿ ಖಾನ್ ಎಂಬಲ್ಲಿ ಬಂಧಿಸಿರುವುದಾಗಿ ಪಾಕಿಸ್ತಾನ ಹೇಳಿದೆ.
ತಾವು ಗೂಢಚಾರ ಎಂದು ತನಿಖೆ ವೇಳೆ ರಾಜು ಒಪ್ಪಿಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಗೂಢಚಾರಿಕೆಗೆ ಪಾಕಿಸ್ತಾನದಲ್ಲಿ ಮರಣ ದಂಡನೆ ವಿಧಿಸಬಹುದಾಗಿದೆ.
ರಾಜು ಅವರನ್ನು ದೇರಾ ಘಾಜಿ ಜಿಲ್ಲೆಯ ರಾಖಿಗಜ್ ಎಂಬಲ್ಲಿಂದ ಬಂಧಿಸ ಲಾಯಿತು. ಇದು ಲಾಹೋರ್ನಿಂದ 400 ಕಿ.ಮೀ. ದೂರದಲ್ಲಿರುವ ಪ್ರದೇಶ. ಈಗ ಅವರನ್ನು ತನಿಖೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಗಡಿ ಗಸ್ತು ಸಂದರ್ಭದಲ್ಲಿ ಸೇನಾ ಪೊಲೀಸರು ರಾಜು ಅವರನ್ನು ಬಂಧಿಸಿ ದ್ದಾರೆ. ಅವರು ದಾರಿ ತಪ್ಪಿ ಪಾಕಿಸ್ತಾನದೊಳಗೆ ಪ್ರವೇಶಿಸಿದ್ದಾರೆಯೇ ಅಥವಾ ಗೂಢಚಾರಿಕೆ ಉದ್ದೇಶಕ್ಕೆ ಬಂದಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ದೇರಾ ಘಾಜಿ ಖಾನ್ ಜಿಲ್ಲೆಯಲ್ಲಿ ಸೂಕ್ಷ್ಮವಾದ ಹಲವು ಸಂಸ್ಥೆ ಗಳಿವೆ. ಹಾಗಾಗಿ, ಈ ಜಿಲ್ಲೆಗೆ ವಿದೇಶಿಯರ ಪ್ರವೇಶಕ್ಕೆ ಸರ್ಕಾರವು ನಿಷೇಧ ಹೇರಿದೆ. ಆದುದರಿಂದ, ಭಾರತೀಯ ವ್ಯಕ್ತಿ ಇಲ್ಲಿಗೆ ಬಂದಿರುವುದು ಯಾಕೆಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಬಲೂಚಿಸ್ತಾನದಿಂದ ಪಾಕಿಸ್ತಾನ ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು ಎಂದು ಪಾಕಿಸ್ತಾನ ಹೇಳಿದೆ. ಪಾಕಿಸ್ತಾನದ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಅವರನ್ನೂ ಬಲೂಚಿಸ್ತಾನ ಪ್ರದೇಶದಲ್ಲಿಯೇ ಬಂಧಿ ಸಲಾಗಿತ್ತು ಎಂದು ಆ ದೇಶ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.