ಅಮರಾವತಿ: ಶ್ರೀಲಂಕಾದ ಚಿತ್ರಗಳಿರುವ ದೋಣಿಯೊಂದು ಬಂಗಾಳ ಕೊಲ್ಲಿಯ ಕರಾವಳಿ ಪ್ರದೇಶದಲ್ಲಿ ಪತ್ತೆಯಾಗಿರುವುದು ಆತಂಕ ಮೂಡಿಸಿದೆ
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪೊನ್ನಪುಡಿ ಪಥುರು ಗ್ರಾಮದ ಬಳಿ ಈ ದೋಣಿ ಪತ್ತೆಯಾಗಿದೆ. ಇದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕೇವಲ 50 ಕಿಲೋ ಮೀಟರ್ ದೂರದಲ್ಲಿದೆ. ‘ರಿಸ್ಯಾಟ್–2ಬಿ’ ಉಪಗ್ರಹ ಉಡಾವಣೆಯಕೆಲವೇ ದಿನಗಳ ಮುನ್ನ ಈ ದೋಣಿ ಸಿಕ್ಕಿದ್ದರಿಂದ ಭದ್ರತಾ ಪಡೆಗಳು ತನಿಖೆಯನ್ನು ಚುರುಕುಗೊಳಿಸಿವೆ.
'ಸ್ಥಳೀಯ ಮೀನುಗಾರರು ಮೂರು ದಿನಗಳ ಹಿಂದೆ ಈ ದೋಣಿ ನೋಡಿದ್ದಾರೆ. ಬಳಿಕ, ದಡಕ್ಕೆ ತಂದು ನಿಲ್ಲಿಸಿದ್ದಾರೆ. ಬಳಿಕ, ಮಾರಾಟ ಮಾಡುವ ಉದ್ದೇಶದಿಂದ ದೋಣಿಯಲ್ಲಿದ್ದ ಹೊಸ ಯಮಹಾ ಎಂಜಿನ್ ಅನ್ನು ತೆಗೆದುಹಾಕಿದ್ದಾರೆ. ಹೊಸ ಎಂಜಿನ್ ಸಿಕ್ಕಿದ್ದಕ್ಕೆ ಮದ್ಯ ಸೇವಿಸಿ ಪಾರ್ಟಿ ಸಹ ಮಾಡಿದ್ದಾರೆ’ ಎಂದು ಕೋವುರ್ ಸರ್ಕಲ್ ಇನ್ಸ್ಪೆಕ್ಟರ್ ಎ.ಡಿ. ಶಿವಪ್ರಸಾದ್ ತಿಳಿಸಿದ್ದಾರೆ.
ದೋಣಿ ಪತ್ತೆ ಮಾಹಿತಿ ದೊರೆತ ತಕ್ಷಣ ಕರಾವಳಿ ಪಡೆ, ಪೊಲೀಸರು, ಗುಪ್ತಚರ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಧಾವಿಸಿ ಮಾಹಿತಿ ಸಂಗ್ರಹಿಸಿದರು. ದೇಶದ ಒಳಗೆ ಉಗ್ರರು ನುಸುಳುವ ಸಾಧ್ಯತೆಗಳಿವೆ ಎನ್ನುವ ಗುಪ್ತಚರ ಇಲಾಖೆ ಮಾಹಿತಿಯಿಂದಾಗಿ ಭದ್ರತಾ ಪಡೆಗಳು ಕಟ್ಟೆಚ್ಚರವಹಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.