ADVERTISEMENT

ಶ್ರೀಶೈಲಂ ಜಲವಿದ್ಯುದಾಗಾರದಲ್ಲಿ ಬೆಂಕಿ ಅವಘಡ: ಒಂಬತ್ತು ಸಾವು

ಪಿಟಿಐ
Published 21 ಆಗಸ್ಟ್ 2020, 20:30 IST
Last Updated 21 ಆಗಸ್ಟ್ 2020, 20:30 IST

ಹೈದರಾಬಾದ್‌: ತೆಲಂಗಾಣ–ಆಂಧ್ರಪ್ರದೇಶ ಗಡಿಯಲ್ಲಿರುವ ನೆಲದಾಳದ ಶ್ರೀಶೈಲಂ ಜಲವಿದ್ಯುದಾಗಾರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಒಂಬತ್ತು ಜನರುಮೃತಪಟ್ಟಿದ್ದು, ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕೃಷ್ಣಾ ನದಿಗೆ ಕಟ್ಟಲಾಗಿರುವಶ್ರೀಶೈಲಂ ಎಡದಂಡೆ ಜಲವಿದ್ಯುದಾಗಾರದಲ್ಲಿ ಗುರುವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್‌ ಸರ್ಕಿಟ್‌ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.ಮೃತಪಟ್ಟವರಲ್ಲಿ ಓರ್ವ ಮಹಿಳೆ ಸೇರಿದಂತೆ ಡೆಪ್ಯುಟಿ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌ ಹಾಗೂ ಘಟಕದ ಕಾರ್ಮಿಕರಿದ್ದರು’ ಎಂದು ನಾಗರಕರ್ನೂಲ್‌ ಜಿಲ್ಲಾ ಕಲೆಕ್ಟರ್‌ ಎಲ್‌.ಶರ್ಮನ್‌ತಿಳಿಸಿದರು.

‘ಸುರಂಗದೊಳಗೆ ಬೆಂಕಿಯನ್ನು ನಂದಿಸಲಾಗಿದ್ದರೂ, ಹೊಗೆ ತುಂಬಿಕೊಂಡಿತ್ತು. ಇದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿತ್ತು. ಘಟನೆಯಲ್ಲಿ ಉಸಿರುಗಟ್ಟಿದ್ದ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಶರ್ಮನ್‌ ತಿಳಿಸಿದ್ದಾರೆ.

ADVERTISEMENT

ಬಹುತೇಕ ಎಲ್ಲರೂ ಹೊಗೆಯ ಕಾರಣ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅವರ ಮೈಯಲ್ಲಿ ಸುಟ್ಟ ಗಾಯಗಳು ಹೆಚ್ಚು ಇರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆಲಂಗಾಣ ರಾಜ್ಯ ವಿದ್ಯುತ್‌ ಉತ್ಪಾದನಾ ನಿಗಮ(ಜೆನ್ಕೊ) ಈ ಘಟಕವನ್ನು ನಿರ್ವಹಿಸುತ್ತಿದ್ದು, ‘ಬೆಂಕಿ ಅವಘಡ ಸಂಭವಿಸಿದ ವೇಳೆ ಅಂದಾಜು 25 ಜನರು ಸುರಂಗದ ಒಳಗೆ ಇದ್ದರು. 15–16 ಜನರು ಹೊರಬಂದಿದ್ದಾರೆ’ ಎಂದು ಜೆನ್ಕೊ ಮುಖ್ಯ ಎಂಜಿನಿಯರ್‌ ಬಿ.ಸುರೇಶ್‌ ತಿಳಿಸಿದರು.ಘಟನೆ ಬಗ್ಗೆ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ನವದೆಹಲಿ: ಶ್ರೀಶೈಲಂ ಜಲವಿದ್ಯುದಾಗಾರದಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.