ADVERTISEMENT

ಕಾನೂನು ಶಿಕ್ಷಣದ ಗುಣಮಟ್ಟ ವೃದ್ಧಿ ಅಗತ್ಯ: ನ್ಯಾಯಮೂರ್ತಿ ಎನ್‌.ವಿ.ರಮಣ

ಸುಪ್ರಿಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 16:41 IST
Last Updated 4 ಏಪ್ರಿಲ್ 2021, 16:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕಳಪೆ ಗುಣಮಟ್ಟದ ಅನೇಕ ಕಾನೂನು ಕಾಲೇಜುಗಳು ಶಿಕ್ಷಣವನ್ನು ನೀಡುತ್ತಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು, ‘ಇದೊಂದು ಆತಂಕಕಾರಿ ಬೆಳವಣಿಗೆ. ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಉಳಿಯಲು ಇದು ಕಾರಣವಾಗಲಿದೆ’ ಎಂದಿದ್ದಾರೆ.

ನ್ಯಾಯಾಂಗವು ಈ ಬೆಳವಣಿಗೆಯನ್ನು ಗಮನಿಸಿದ್ದು, ಸರಿಪಡಿಸಲು ಯತ್ನಿಸುತ್ತಿದೆ. ಕಳಪೆ ಗುಣಮಟ್ಟದ ಕಾನೂನು ಶಿಕ್ಷಣದ ಒಟ್ಟು ಪರಿಣಾಮವೆಂದರೆ ಸಾಕಷ್ಟು ಪ್ರಕರಣಗಳು ಬಾಕಿ ಉಳಿಯುವುದೇ ಆಗಿದೆ ಎಂದು ಹೇಳಿದರು.

ಸದ್ಯ, ಹೆಚ್ಚಿನ ಸಂಖ್ಯೆಯಲ್ಲಿ ವಕೀಲರಿದ್ದರೂ ದೇಶದಲ್ಲಿ ಎಲ್ಲ ಕೋರ್ಟ್‌ಗಳಲ್ಲಿ ಪ್ರಸ್ತುತ ಸುಮಾರು 3.8 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ದೇಶದ ಜನಸಂಖ್ಯೆ 130 ಕೋಟಿಯಷ್ಟಿದೆ ಎಂಬ ಅಂಶವನ್ನು ಗಮನದಲ್ಲಿ ಇಟ್ಟುಕೊಂಡೇ ಈ ಅಂಕಿ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ವಿಶಾಖಪಟ್ಟಣಂ ಮೂಲಕ ದಾಮೋದರನ್‌ ಸಂಜೀವಯ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಅವರು ವರ್ಚುಯಲ್‌ ಸ್ವರೂಪದದಲ್ಲಿ ಭಾಷಣ ಮಾಡಿದರು.

ದೇಶದಲ್ಲಿ ಸುಮಾರು 1500 ಕಾನೂನು ಕಾಲೇಜುಗಳು, ಶಾಲೆಗಳು ಇವೆ. 23 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಒಳಗೊಂಡು ವಾರ್ಷಿಕ ಪ್ರತಿವರ್ಷ 1.5 ಲಕ್ಷ ವಿದ್ಯಾರ್ಥಿಗಳು ಪದವೀಧರರಾಗಿ ಹೊರಬರುತ್ತಾರೆ. ನಿಜಕ್ಕೂ ಇದು ದೊಡ್ಡ ಸಂಖ್ಯೆ. ವಕೀಲಿ ವೃತ್ತಿಯು ಈಗ ಉಳ್ಳವರಿಗಷ್ಟೇ ಅಲ್ಲ. ಕಾನೂನು ಶಿಕ್ಷಣದ ಅವಕಾಶದ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಸಮಾಜದ ಎಲ್ಲ ಸ್ತರದ ಜನರು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಕಾನೂನು ಶಿಕ್ಷಣ ವ್ಯವಸ್ಥೆಗೆ ಸಮಗ್ರವಾಗಿ ಹೊಸ ರೂಪ ನೀಡಲು ಸಂಘಟಿತ ಪ್ರಯತ್ನ ಅಗತ್ಯ. ವೃತ್ತಿ ಬದುಕಿನ ಹೊರತಾಗಿಯೂ ಶಿಕ್ಷಣ ವಿದ್ಯಾರ್ಥಿಗೆ ಹೊಸ ಚಿಂತನೆಗೆ ಉತ್ತೇಜನ ನೀಡುವಂತಿರಬೇಕು ಎಂದು ಅವರು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.