ಹೈದರಾಬಾದ್: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಿದ್ದರೆ ನಿಮ್ಮ ಮನೆಗಳನ್ನು ಬುಲ್ಡೋಜರ್ನಿಂದ ಉರುಳಿಸಲಾಗುವುದು ಮತ್ತು ನಿಮ್ಮನ್ನು ರಾಜ್ಯದಿಂದ ಹೊರಹಾಕಲಾಗುವುದು ಎಂದು ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಮತದಾರರನ್ನು ಬೆದರಿಸುವ ವಿಡಿಯೊ ವೈರಲ್ ಆಗಿದೆ.
ಹೈದರಾಬಾದ್ನ ಗೋಶಮಹಲ್ ಶಾಸಕರಾಗಿರುವ ಟಿ. ರಾಜಾ, ‘ಸೋಮವಾರ ನಡೆದ ಎರಡನೇ ಹಂತದ ಚುನಾವಣೆ ವೇಳೆ ಅಧಿಕ ಸಂಖ್ಯೆಯಲ್ಲಿ ಮತದಾನವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶತ್ರುಗಳೆಲ್ಲ ಮತ ಹಾಕಲು ಹೊರಗೆ ಬಂದಿದ್ದಾರೆ’ಎಂದು ಅವರು ಹೇಳಿದ್ದಾರೆ.
ಹಿಂದೂ ಸಹೋದರ, ಸಹೋದರಿಯರೇ ಮನೆಯಿಂದ ಹೊರಬನ್ನಿ ಉಳಿದ 5 ಹಂತಗಳ ಚುನಾವಣೆಯಲ್ಲಿ ಮತದಾನ ಮಾಡಿ ಎಂದು ಅವರು ಹೇಳಿದ್ದಾರೆ.
‘ಬಿಜೆಪಿಗೆ ಯಾರು ಮತ ಹಾಕುವುದಿಲ್ಲವೋ ಅಂತಹವರಿಗೆ ನಾನು ಹೇಳಲು ಬಯಸುವುದೇನೆಂದರೆ, ಯೋಗಿ ಜೀ ಉತ್ತರ ಪ್ರದೇಶಕ್ಕೆ ಸಾವಿರಾರು ಜೆಸಿಬಿ ಮತ್ತು ಬುಲ್ಡೋಜರ್ಗಳನ್ನು ತರುತ್ತಿದ್ದಾರೆ. ಅವುಗಳು ಮಾರ್ಗಮಧ್ಯದಲ್ಲಿವೆ. ಚುನಾವಣೆ ಬಳಿಕ, ಯಾರು ಯೋಗಿ ಜೀ ಅವರನ್ನು ಬೆಂಬಲಿಸಿಲ್ಲ ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಜೆಸಿಬಿ ಮತ್ತು ಬುಲ್ಡೋಜರ್ ಏನು ಮಾಡುತ್ತವೆ ಎಂಬುದು ನಿಮಗೆ ಗೊತ್ತಿದೆ’ಎಂದು ಹೇಳಿದ್ದಾರೆ.
‘ಯೋಗಿ ಆದಿತ್ಯನಾಥ್ ಅವರು ಮತ್ತೆ ಸಿಎಂ ಆಗುವುದು ಬೇಡ ಎಂದು ಬಯಸುವವರಿಗೆ ನಾನು ಏನು ಹೇಳುತ್ತೇನೆಂದರೆ.. ಬೇಟ.. ನೀನು ಉತ್ತರ ಪ್ರದೇಶದಲ್ಲಿ ಜೀವನ ನಡೆಸಬೇಕೆಂದರೆ ಯೋಗಿ ಯೋಗಿ ಎನ್ನಲೇಬೇಕು ಅಥವಾ ರಾಜ್ಯ ತೊರೆಯಬೇಕು’ಎಂದು ಉದ್ಧಟತನದ ಮಾತುಗಳನ್ನಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದ್ದು, ಶಾಸಕನ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಒತ್ತಾಯಿಸಿದ್ದಾರೆ.
ಟಿಆರ್ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮ ರಾವ್ ಸಹ ಶಾಸಕನ ಹೇಳಿಕೆಯನ್ನು ಖಂಡಿಸಿದ್ದು, ಅವರೊಬ್ಬ ಜೋಕರ್ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.