ನವದೆಹಲಿ: ಆಧಾರ್ ಸಹ ಸಾಂವಿಧಾನಿಕ ಸಿಂಧುತ್ವ ಹೊಂದಿದೆ ಎಂಬ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜೂನ್ 9ರಂದು ಕೈಗೆತ್ತಿಕೊಳ್ಳಲಿದೆ.
ಮಕ್ಕಳ ಹಕ್ಕುಗಳ ಸಮಿತಿಯ ಮಾಜಿ ಮುಖ್ಯಸ್ಥೆ ಶಾಂತಾ ಸಿನ್ಹಾ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಕ್ಲರ್, ಡಿ.ವೈ.ಚಂದ್ರಚೂಡ್, ಅಶೋಕ್ ಭಾನ್ ಹಾಗೂ ಎಲ್.ನಾಗೇಶ್ವರರಾವ್ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಈ ಅರ್ಜಿ ವಿಚಾರಣೆ ನಡೆಸಲಿದೆ.
‘ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಮಹತ್ವದವಿಷಯಗಳಿವೆ. ಹೀಗಾಗಿ ಮೌಖಿಕವಾಗಿ, ಕೋರ್ಟ್ನಲ್ಲಿ ಮುಕ್ತವಾಗಿ ಹೇಳಿಕೆ ದಾಖಲಿಸಲು ಅನುಮತಿ ನೀಡಬೇಕು‘ ಎಂದು ಅರ್ಜಿದಾರರು ಕೋರಿದ್ದಾರೆ.
2019ರಲ್ಲಿ ಈ ವಿಷಯವಾಗಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ‘ನಾಗರಿಕರ ಖಾಸಗಿತನ ಹಾಗೂ ಗೌರವ ಕಾಪಾಡುವ ದೃಷ್ಟಿಯಿಂದ ಆಧಾರ್ ವಿತರಿಸುವ ಕಾರ್ಯಕ್ರಮ ಸಮತೋಲದಿಂದ ಕೂಡಿದೆ'ಎಂದು ಅಭಿಪ್ರಾಯಪಟ್ಟಿತ್ತು.
‘ಕೋಟ್ಯಂತರ ಅರ್ಹ ನಾಗರಿಕರಿಗೆ ಸರ್ಕಾರದ ಸವಲತ್ತುಗಳು ಈ ಕಾರ್ಯಕ್ರಮದಿಂದಾಗಿ ಸಿಗುವಂತಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, 12 ಅಂಕಿಗಳುಳ್ಳ ಈ ವಿಶಿಷ್ಟ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಮತ್ತು ಮೊಬೈಲ್ ನಂಬರ್ಗೆ ಜೋಡಿಸುವುದಕ್ಕೆ ನಿರ್ಬಂಧ ವಿಧಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.