ADVERTISEMENT

ಉಗ್ರರಿಗೆ ಕಳೆದ ವರ್ಷವೂ ನೆರವು ನೀಡಿದ್ದ ಡಿವೈಎಸ್ಪಿ

ತನಿಖೆ ವೇಳೆಯಲ್ಲಿ ಮಾಹಿತಿ ಬಹಿರಂಗ

ಪಿಟಿಐ
Published 14 ಜನವರಿ 2020, 19:45 IST
Last Updated 14 ಜನವರಿ 2020, 19:45 IST

ಶ್ರೀನಗರ : ‘ಅಮಾನತುಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಡಿವೈಎಸ್ಪಿ ದೇವಿಂದರ್ ಸಿಂಗ್, ಕಳೆದ ವರ್ಷವೂ ಹಿಜ್ಬುಲ್ ಮುಜಾದ್ದೀನ್ ಸಂಘಟನೆಯ ಉಗ್ರ ನವೀದ್ ಬಾಬುಗೆ ಜಮ್ಮುವಿನಲ್ಲಿ ವಿರಾಮ ಮತ್ತು ಚೇತರಿಕೆಗೆ ಅವಕಾಶ ಮಾಡಿಕೊಟ್ಟು, ನಂತರ ಶೋಫಿಯಾನ್‌ಗೆ ಮರಳಲು ಅವಕಾಶ ಕಲ್ಪಿಸಿದ್ದ’ಎಂದು ತನಿಖಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಆಗ ಏನ್‌ ಮಾಡಿದ್ದೆನೋ ಏನೋ, ನನ್ನ ತಲೆ ಬುದ್ಧಿ ಕೆಟ್ಟುಹೋಗಿತ್ತು’ ಎಂದು ದೇವಿಂದರ್ ಸಿಂಗ್ ತನಿಖೆ ವೇಳೆ ಅಧಿಕಾರಿಗಳ ಮುಂದೆ ಹೇಳಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಗ್ರರಾದ ನವೀದ್ ಬಾಬು ಅಲಿಯಾಸ್ ಬಾಬರ್ ಅಜಂ ಮತ್ತು ಆತನ ಸಹಚರ ಆಸಿಫ್ ಅಹ್ಮದ್‌ ಜೊತೆ ಶನಿವಾರ ಡಿವೈಎಸ್ಪಿ ದೇವಿಂದರ್ ಸಿಂಗ್‌ನನ್ನು ಬಂಧಿಸಲಾಗಿತ್ತು.ಉಗ್ರರಿಬ್ಬರಿಗೆ ಚಂಡೀಗಡದಲ್ಲಿ ಕೆಲ ತಿಂಗಳುಗಳ ಕಾಲ ವಸತಿ ಕಲ್ಪಿಸಲು ದೇವಿಂದರ್ ಸಿಂಗ್ ₹ 12 ಲಕ್ಷ ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘2019ರಲ್ಲೂ ಉಗ್ರರಿಬ್ಬರನ್ನು ದೇವಿಂದರ್ ಜಮ್ಮುವಿಗೆ ಕರೆದೊಯ್ದಿದ್ದ. ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಕಣ್ತಪ್ಪಿಸಲು ಗುಡ್ಡಗಾಡು ಪ್ರದೇಶದಲ್ಲಿ ವಸತಿ ಕಲ್ಪಿಸಲಾಗಿತ್ತು. ಉಗ್ರ ನವೀದ್ ಕೂಡಾ ಇದೇ ರೀತಿ ಹೇಳಿದ್ದಾನೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಿವೈಎಸ್ಪಿಯ ಬ್ಯಾಂಕ್ ಅಕೌಂಟ್ ಮತ್ತು ಇತರ ಆಸ್ತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಕಾಗದ ಪತ್ರಗಳನ್ನು ಸಂಗ್ರಹಿಸಲಾಗುತ್ತಿದೆ. ಈ ನಡುವೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.