ADVERTISEMENT

ಹಳೇ ಪಿಂಚಣಿ ಯೋಜನೆಗೆ ‘ವೋಟ್ ಫಾರ್ ಒಪಿಎಸ್’ ನಡೆಸಲು ಶಿಕ್ಷಕರ ಫೆಡರೇಷನ್ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 13:23 IST
Last Updated 5 ಅಕ್ಟೋಬರ್ 2023, 13:23 IST
<div class="paragraphs"><p>ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವಪತಿಯಿಂದ ದೆಹಲಿಯಲ್ಲಿ ಗುರುವಾರ ನಡೆದ&nbsp;ಭಾರತ ಯಾತ್ರೆಯ ಸಮಾರೋಪದಲ್ಲಿ ಬಸವರಾಜ ಗುರಿಕಾರ ಮಾತನಾಡಿದರು.&nbsp;</p></div>

ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವಪತಿಯಿಂದ ದೆಹಲಿಯಲ್ಲಿ ಗುರುವಾರ ನಡೆದ ಭಾರತ ಯಾತ್ರೆಯ ಸಮಾರೋಪದಲ್ಲಿ ಬಸವರಾಜ ಗುರಿಕಾರ ಮಾತನಾಡಿದರು. 

   

ನವದೆಹಲಿ: ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ‘ಭಾರತ್‌ ಬಂದ್‌’ ಹಾಗೂ ‘ವೋಟ್ ಫಾರ್ ಒಪಿಎಸ್’ ಅಭಿಯಾನ ನಡೆಸುವ ನಿರ್ಣಯವನ್ನು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಸದಸ್ಯರು ಸರ್ವಾನುಮತದಿಂದ ನಿರ್ಣಯಿಸಿದರು.

ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವತಿಯಿಂದ ಒಂದು ತಿಂಗಳ ವರೆಗೆ ನಡೆದ ಭಾರತ ಯಾತ್ರೆಯ ಸಮಾರೋಪ ದೆಹಲಿಯ ಸಿರಿ ಪೋರ್ಟ್ ಆಡಿಟೋರಿಯಂನಲ್ಲಿ ಮುಕ್ತಾಯಗೊಂಡಿದ್ದು, ಸಮಾರೋಪದಲ್ಲಿ ನಾಯಕರು ಹಾಗೂ ಸರ್ವ ಸದಸ್ಯರು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ADVERTISEMENT

ಸೆ. 5ರಂದು ಶಿಕ್ಷಕರ ದಿನಾಚರಣೆ ದಿನ ಪ್ರಾರಂಭವಾದ ಭಾರತ ಯಾತ್ರೆ ಅ. 5 ೫ರಂದು ನವದೆಹಲಿಯಲ್ಲಿ ಬೃಹತ್ ಸಭೆ ಮಾಡುವ ಮೂಲಕ ಮುಕ್ತಾಯಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಫೆಡರೇಶನ್ ಪದಾಧಿಕಾರಿಗಳು ಕೂಡಲೇ ಸರಕಾರ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

‘ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ ಯಾತ್ರೆ 10 ಸಾವಿರ ಕಿ.ಮೀ. ಸಂಚರಿಸಿದೆ. ಅಸ್ಸಾಂನ ಗುವಾಹಟಿಯಿಂದ, ಪಂಜಾಬ್‌ನ ವಾಗಾ ಗಡಿ, ಗುಜರಾತಿನ ಸೋಮನಾತಪುರ ನಾಲ್ಕು ತಂಡಗಳಲ್ಲಿ ಭಾರತ ಯಾತ್ರೆ ನಡೆದಿದೆ. ಯಾತ್ರೆಗೆ ಎಲ್ಲಾ ರಾಜ್ಯಗಳಲ್ಲೂ ಉತ್ತಮ ಸ್ಪಂದನೆ ದೊರೆತಿದೆ. ಬೇಡಿಕೆ ಈಡೇರಿಕೆಗೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಎಐಪಿಟಿಎಫ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

‘ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ ನಿಲ್ಲಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಲಾಗಿದೆ. ಇದರಿಂದ ಲಕ್ಷಾಂತರ ಶಿಕ್ಷಕರ ಕುಟುಂಬಗಳು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದರು.

‘ಈ ಕೂಡಲೇ ನೂತನ ಪಿಂಚಣಿ ರದ್ದುಗೊಳಿಸಿ ಹಳೆ ಪಿಂಚಣಿ ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡು ರಾಜ್ಯಗಳಿಗೆ ತಿಳಿಸಬೇಕು. ಅಲ್ಲದೇ ನೂತನ ಶಿಕ್ಷಣ ಪದ್ಧತಿಯಿಂದ ಶಿಕ್ಷಣಕ್ಕೆ ಮತ್ತು ಶಿಕ್ಷಕರಿಗೆ ತೊಂದರೆ ಆಗಲಿದೆ. ಜೊತೆಗೆ ಎನ್‌ಇಪಿಯಲ್ಲಿ ಕೆಲವು ವಿದ್ಯಾರ್ಥಿ ವಿರೋಧಿ ಅಂಶಗಳಿವೆ. ಅವುಗಳನ್ನು ಕೂಡಲೇ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಸಭೆಯಲ್ಲಿ ಅಂತಾರಾಷ್ಟ್ರೀಯ ಶಿಕ್ಷಕ ಸಂಘಟನೆ ಅಧ್ಯಕ್ಷ ಸೂಸ್ಮನ್ ಹೂಪಡ್, ಕಾರ್ಯದರ್ಶಿ ರಾಬರ್ಟ್, ಉಪಾಧ್ಯಕ್ಷೆ ಕರೆನಾ ಇ., ಎಐಪಿಟಿಎಫ್ ಮಹಾಪ್ರಧಾನ ಕಾರ್ಯದರ್ಶಿ ಕಮಲಕಾಂತ ತ್ರಿಪಾಠಿ, ಹರಿಗೋವಿಂದನ್, ಚಂದ್ರಶೇಖರ ನುಗ್ಗಲಿ, ರಾಮಚಂದ್ರ ಬಾಸ್, ಸೀಮಾ ಮಾತುರ, ರಮಾದೇವಿ, ಶಿವಪಾಲ್ ಮಿಶ್ರಾ, ರೋನಿ ರೋಶನ್ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.