ADVERTISEMENT

ಕರ್ನಾಟಕದಲ್ಲಿ ಎನ್‌ಆರ್‌ಸಿ: ತೇಜಸ್ವಿಸೂರ್ಯ ಆಗ್ರಹ

ಬಾಂಗ್ಲಾದೇಶದ ವಲಸಿಗರಿಂದ ಆರ್ಥಿಕ ಭದ್ರತೆಗೆ ಅಪಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 18:33 IST
Last Updated 10 ಜುಲೈ 2019, 18:33 IST
ತೇಜಸ್ವಿ ಸೂರ್ಯ (ಸಂಗ್ರಹ ಚಿತ್ರ)
ತೇಜಸ್ವಿ ಸೂರ್ಯ (ಸಂಗ್ರಹ ಚಿತ್ರ)   

ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಕರ್ನಾಟಕಕ್ಕೂ ವಿಸ್ತರಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಲೋಕಸಭೆಯಲ್ಲಿ ಬುಧವಾರ ಆಗ್ರಹಿಸಿದರು. ರಾಜ್ಯದಲ್ಲಿ ನೆಲೆಸಿರುವ 40 ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶದ ವಲಸಿಗ ಮುಸ್ಲಿಮರಿಂದ ರಾಜ್ಯದ ಭದ್ರತೆಗೆ ಅಪಾಯವಿದೆ ಎಂದು ಅವರು ಪ್ರತಿಪಾದಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೂರ್ಯ, ಬಾಂಗ್ಲಾ ವಲಸಿಗರು ಕರ್ನಾಟಕದ ಜನರಿಗೆ ಗಂಭೀರ ಆರ್ಥಿಕ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹೇಳಿದ್ದಾರೆ. ‘ರಾಜ್ಯ ಸರ್ಕಾರ ಮತ್ತು ಕೆಲವು ಸಂಸ್ಥೆಗಳಿಂದ ಅಕ್ರಮವಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಇತರೆ ದಾಖಲೆಗಳನ್ನು ಪಡೆದುಕೊಂಡು ಅವರು ಉದ್ಯೋಗ ಪಡೆಯುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಅಕ್ರಮ ವಾಸಿಗಳನ್ನು ದೇಶದಿಂದ ತೆರವುಗೊಳಿಸಬೇಕಾದರೆ, ಎಲ್ಲ ರಾಜ್ಯಗಳಿಗೆ ಎನ್‌ಆರ್‌ಸಿ ವಿಸ್ತರಿಸಬೇಕು. ಅಸ್ಸಾಂನಲ್ಲಿ ನೋಂದಣಿ ಆರಂಭವಾದ ಬಳಿಕ ಅವರು ಉಳಿದ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕೇಂದ್ರೀಯ ಅಪರಾಧ ತನಿಖಾ ದಳವು ಓಲಾ ಕಂಪನಿಯ ಹಿರಿಯ ಅಧಿಕಾರಿಯೊಬ್ಬರನ್ನು ಬಂಧಿಸಿತ್ತು. ಆ ವ್ಯಕ್ತಿ ಬಾಂಗ್ಲಾದ ಅಕ್ರಮ ವಲಸಿಗ ಎಂಬ ಅಂಶ ಬಳಿಕ ಪತ್ತೆಯಾಯಿತು. ಬಾಂಗ್ಲಾದೇಶದಿಂದ ಕೆಲಸ ಮಾಡುವ ಭಯೋತ್ಪಾದಕ ಜಾಲವನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಲಾಯಿತು. ವಿಚಾರಣೆಯಿಂದ ಬಯಲಾದ ಅಂಶಗಳೂ ದಿಗಿಲು ಹುಟ್ಟಿಸುವಂತಿವೆ. ಅಕ್ರಮವಾಸಿಗಳು ದೇಶದ ಇತರ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಇದು ದೇಶದ ಭದ್ರತೆಗೆ ದೊಡ್ಡ ಅಪಾಯ’ ಎಂದು ಸೂರ್ಯ ಹೇಳಿದರು.

‘ಕ್ಯಾಬ್ ಚಾಲಕ, ಹೋಟೆಲ್ ಕಾರ್ಮಿಕ ಅಥವಾ ಚಿಂದಿ ಆಯುವ ಕೆಲಸಗಳನ್ನು ಬಾಂಗ್ಲಾದೇಶೀಯರು ಸ್ಥಳೀಯರಿಂದ ಕಿತ್ತುಕೊಂಡಿದ್ದಾರೆಎಂದು ಸೂರ್ಯ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.